ಬೆಂಗಳೂರು: ದಬ್ಬಾಳಿಕೆಯಿಂದ ರೈತರ ಸಾಲ ವಸೂಲಿ ಮಾಡುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿಗೆ ಮಂಡ್ಯ ಜಿಲ್ಲೆಯಲ್ಲಿ ರೈತ ಹಾಗೂ ಆತನ ಕುಟುಂಬ ಆತ್ಮಹತ್ಯೆ ಹಾಗೂ ಗದಗ್ ಜಿಲ್ಲೆಯಲ್ಲಿ ಬ್ಯಾಂಕ್ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ಕಠಿಣ ಸಂದೇಶವನ್ನು ರವಾನಿಸಿದ್ದಾರೆ.
ರೈತರ ಸಾಲ ಮನ್ನಾ ಕುರಿತ ಪರಿಶೀಲನಾ ಸಭೆಯ ನಂತರ ಮಾತನಾಡಿದ ಕುಮಾರಸ್ವಾಮಿ, ಸಹಕಾರಿ ಬ್ಯಾಂಕ್ ಗಳಲ್ಲಿನ ಸಾಲ ಮನ್ನಾ ಮಾಡಲು ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದ್ದು, ಬ್ಯಾಂಕ್ ಅಧಿಕಾರಿಗಳಾಗಲೀ ಅಥವಾ ಖಾಸಗಿ ಸಾಲ ನೀಡುವವರಾಗಲೀ ದಬ್ಬಾಳಿಕೆಯಿಂದ ರೈತರಿಂದ ಸಾಲ ವಸೂಲಿ ಮಾಡಲು ಯತ್ನಿಸಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂಬಂಧ ಪೊಲೀಸ್ ಇಲಾಖೆ ಈಗಾಗಲೇ ಎಲ್ಲಾ ಠಾಣೆಗಳಿಗೆ ಆದೇಶ ನೀಡಿದೆ. ದಬ್ಬಾಳಿಕೆ ವಿರುದ್ಧ ರೈತರು ದೂರು ದಾಖಲಿಸಲು ಅನುಕೂಲವಾಗುವಂತೆ ಎಲ್ಲಾ ಜಿಲ್ಲೆಗಳಲ್ಲಿ ಸಹಾಯವಾಣಿ ತೆರೆಯಲಾಗುತ್ತಿದೆ. ನಾಡಕಚೇರಿ ಹಾಗೂ ತಾಲೂಕ್ ಕಚೇರಿಯಲ್ಲಿಯೂ ರೈತರು ದೂರು ದಾಖಲಿಸಬಹುದು ಎಂದು ಹೇಳಿದರು.
Advertisement