ಬೆಂಗಳೂರು: ಹೆದ್ದಾರಿ ಸಂಚಾರಿ ಗಸ್ತು ವಾಹನಹಾಗೂ ಭಯೋತ್ಪಾದನಾ ನಿಗ್ರಹ ಘಟಕ ಮತ್ತು ಸೈಬರ್, ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ತಡೆ ಕುರಿತ ಠಾಣೆಗಳಿಗೆ ಮುಖ್ಯಮಂತ್ರಿ ಬಿ,ಎಸ್. ಯಡಿಯೂರಪ್ಪ ಚಾಲನೆ ನೀಡಿದರು.
ವಿಧಾನಸೌಧದ ಮುಂಭಾಗದಲ್ಲಿ 15 ಕೋಟಿ ರೂ.ವೆಚ್ಚದ 88 ಗಸ್ತು ವಾಹನಗಳಿಗೆಹಸಿರು ನಿಶಾನೆ ತೋರಿದರು. ಬಳಿಕ ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ಸಿಇಎಸ್ (ಸೈಬರ್, ಎಕನಾಮಿಕ್ಸ್, ಮತ್ತು ನಾರ್ಕೋಟಿಕ್) ಪೊಲೀಸ್ ಠಾಣೆಗಳು ಮತ್ತು ಭಯೋತ್ಪಾದಕ ನಿಗ್ರಹ ದಳಕ್ಕೆ ಚಾಲನೆ ನೀಡಿದರು.
ಬಳಿಕ ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ, ರಾಷ್ಟ್ರದಲ್ಲೇ ಅತ್ಯಂತ ಉತ್ತಮ ಕಾನೂನು ಸುವ್ಯವಸ್ಥೆ ಹೊಂದಿರುವ ರಾಜ್ಯ ಕರ್ನಾಟಕ. ರಾಜ್ಯ ಪೊಲೀಸರ ಕಾರ್ಯವೈಖರಿ ಮಾದರಿಯಾಗಿದೆ. ಬೆಂಗಳೂರಿನಲ್ಲಿ ಸೈಬರ್ ಅಪರಾಧ, ಸರಗಳ್ಳತನ, ಕೊಲೆ ಸುಲಿಗೆ ಪ್ರಕರಣಗಳು ಹೆಚ್ಚುತ್ತಿವೆ. ಅವುಗಳ ನಿಗ್ರಹಕ್ಕೆ ಮೊದಲ ಅದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವರೂ ಕೂಡ ಅಗತ್ಯ ನೆರವು ನೀಡುತ್ತಾರೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸೈಬರ್ ಕ್ರೈಂ ಮತ್ತು ಆರ್ಥಿಕ ಅಪರಾಧಗಳ ನಡುವೆ ನೇರ ಸಂಬಂಧ ಇದೆ. ನಾರ್ಕೊಟಿಕ್ ಮತ್ತು ಸೈಬರ್ ಅಪರಾಧಗಳ ನಡುವೆ ನೇರ ಸಂಪರ್ಕವಿದೆ. ಇತ್ತೀಚೆಗೆ ಸೈಬರ್ ಕ್ರೈಂ,ಆರ್ಥಿಕ ಅಪರಾಧ ಮತ್ತು ಮಾದಕ ವಸ್ತು ಮಾರಾಟ ಬಳಕೆ ಪ್ರಕರಣಗಳು ಹೆಚ್ಚಾಗಿವೆ. ಒಂದೊಂದು ಸೈಬರ್ ಠಾಣೆಗೆ ಹತ್ತು ಸಾವಿರಕ್ಕಿಂತ ಹೆಚ್ಚು ದೂರುಗಳು ಬಂದಾಗ ನಿರ್ವಹಣೆ ಕಷ್ಟವಾಗಿತ್ತು. ಹಾಗಾಗಿ ಬೆಂಗಳೂರಿನ 8 ಡಿಸಿಪಿ ವಿಭಾಗಗಳಲ್ಲಿ ಎಂಟು ಸೈಬರ್ ಠಾಣೆಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದು ತಿಳಿಸಿದರು.
ಐಟಿ ತಜ್ಞರನ್ನು 35,000 ದಿಂದ 50,000ರೂ ವರೆಗೆ ವೇತನ ನೀಡಿ ಸೈಬರ್ ಠಾಣೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಬೆಂಗಳೂರಿನಲ್ಲಿ ಭಯೋತ್ಪಾದಕರ ಸ್ಲೀಪರ್ ಸೆಲ್ ಗಳಿವೆ ಎಂದು ರಾಷ್ಟ್ರೀಯ ತನಿಖಾ ದಳ - ಎನ್ಐಎ ನಿಂದ ಮಾಹಿತಿ ಬಂದಿದೆ. ಹಾಗಾಗಿ ಬೆಂಗಳೂರಿಗೆ ಪ್ರತ್ಯೇಕ ಭಯೋತ್ಪಾದಕ ನಿಗ್ರಹ ದಳ ಸ್ಥಾಪನೆ ಮಾಡುತ್ತಿದ್ದೇವೆ. ಬೆಂಗಳೂರನ್ನು ಭಯೋತ್ಪಾದನೆ ಮುಕ್ತ ಹಾಗೂ ನಾಗರಿಗೆ ಸುರಕ್ಷಿತ ನಗರವಾಗಿ ಮಾಡುವುದು ನಮ್ಮ ಗುರಿ ಎಂದು ತಿಳಿಸಿದರು.
Advertisement