ಬೆಂಗಳೂರು: ಮಂಗಳೂರಿನಲ್ಲಿ ನಡೆದ ಗಲಭೆಗಳು ಪೂರ್ವಯೋಜಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕೇಂದ್ರ ಕಾರ್ಯಾಲಯದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಜಾಗೃತಿ ಮೂಡಿಸುವ ಕಾರ್ಯಾಗಾರದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಗಳ ವೇಳೆ ನಡೆದ ಗಲಭೆಗಳು ಪೂರ್ವಯೋಜಿತ ಎಂಬುದು ಸ್ಪಷ್ಟವಾಗಿದೆ. ಕಾಶ್ಮೀರದ ಶೈಲಿಯಲ್ಲಿ ಯುವಕರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇವರಲ್ಲಿ ಹೊರ ರಾಜ್ಯದವರೂ ಸೇರಿದ್ದಾರೆ. ಗಲಭೆಗಳ ಹಿಂದೆ ಕಾಂಗ್ರೆಸ್ನ ಕೈವಾಡ ಇದೆ. ದಾಂಧಲೆಗಳ ಹಿಂದೆ ಕಾಂಗ್ರೆಸ್ನ ಷಡ್ಯಂತ್ರವಿದೆ. ಸ್ಥಳೀಯರೇ ಆದ ಶಾಸಕರೊಬ್ಬರು ಪ್ರತಿಭಟನೆಗೂ ಮುನ್ನ ಕರ್ನಾಟಕಕ್ಕೆ ಬೆಂಕಿ ಬೀಳುತ್ತೆ ಎಂದು ಹೇಳಿದ್ದರು. ಅದರಂತೆಯೇ ಆಗಿದೆ. ಪೂರ್ವ ತಯಾರಿ ನಡೆಸಿ ಪೊಲೀಸರ ಮೇಲೆ ದಾಳಿ ನಡೆಸಲು ಕಲ್ಲುಗಳು, ಆಯುಧಗಳನ್ನು ಸಂಗ್ರಹಿಸಿದ್ದರು. ಯುವಕರು ಮುಖಮುಚ್ಚುವ ಅವಶ್ಯಕತೆ ಏನಿತ್ತು? ದಾಂಧಲೆ ನಡೆಸಲೆಂದೇ ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಿದರು.
ಮಂಗಳೂರು ಗಲಭೆ, ರಾಜ್ಯವನ್ನು ಬೆಚ್ಚಿಬೀಳಿಸಿದ್ದು, ಹಿಂಸಾಚಾರ ಹಿಂದಿರುವ ಶಕ್ತಿಗಳ ವಿರುದ್ಧ ಕ್ರಮ ಅಗತ್ಯವಾಗಿದೆ. ವ್ಯವಸ್ಥಿತವಾಗಿ ಆಟೋಗಳಲ್ಲಿ ಜಲ್ಲಿ ಕಲ್ಲು ಪೂರೈಕೆ ಮಾಡಿರುವುದು, ಬಂದರು ಪ್ರದೇಶದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಮಾಡಿರುವುದು, ಪೆಟ್ರೋಲ್ ಬಾಂಬ್ಗಳನ್ನು ತೂರಿರುವುದು, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ದಾಂಧಲೆ ನಡೆಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ನಿಟ್ಟಿನಲ್ಲಿ ಗಲಭೆಗಳಿಗೆ ಕಾರಣವಾದ ಪಿಎಫ್ಐ, ಕೆಎಫ್ಡಿ, ಎಸ್ಡಿಪಿಐ ಮತ್ತು ಕಾಂಗ್ರೆಸ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
Advertisement