ಬೆಂಗಳೂರು: ಪೌರತ್ವ ಕಾಯ್ದೆ ವಿಷಯದಲ್ಲಿ ನಡೆಯುತ್ತಿರುವ ಹಾಗು ವಿರೋಧಿ ಪ್ರತಿಭಟನೆಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ನಗರದಲ್ಲಿ ಬಿಜೆಪಿಯ ನಾಯಕರ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿತು.
ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ,ಸಚಿವ ಸಿಟಿ ರವಿ ,ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪೌರತ್ವ ಕಾಯ್ದೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಹಾಗೂ ಹೋರಾಟ ನಡೆಯುತ್ತಿದ್ದು ಬಿಜೆಪಿ ಈ ಸಂದರ್ಭ ಪ್ರಚೋದನಕಾರಿ ಹೇಳಿಕೆ ನೀಡುವ ದುರಹಂಕಾರದ ವರ್ತನೆಯನ್ನು ತೋರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮನೋಹರ್, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೋರಾಟಗಾರನ ಅವಮಾನಿಸಿದ್ದಾರೆ. ನಾಲ್ಕು ಅಕ್ಷರ ಬಾರದವರು ಪಂಚರ್ ಅಂಗಡಿ ಇಟ್ಟಿರುವವರು ಹೋರಾಟ ನಡೆಸುತ್ತಿದ್ದಾರೆ ಎಂಬ ಹೇಳಿಕೆ ಮೂಲಕ ಮತದಾರರು ಹಾಗೂ ನಾಗರಿಕರನ್ನು ಅವಮಾನಿಸಿದ್ದಾರೆ. ಸಂಸದರಾಗಿ ಆಯ್ಕೆಯಾಗಿ ರುವ ತೇಜಸ್ವಿಸೂರ್ಯ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ತೋರಿಸ ಬೇಕು. ಜನಸಾಮಾನ್ಯನ ಮತ ಪಡೆದು ಈಗ ಅವರನ್ನೇ ಅವಮಾನಿಸಿದ್ದಾರೆ. ಸಾಮಾನ್ಯ ಮತದಾರರಿಗೂ ಹಾಗೂ ದೇಶದ ರಾಷ್ಟ್ರಪತಿಗೆ ಮತದಾನದ ಹಕ್ಕು ಒಂದೇ ಎಂಬುದನ್ನು ತಿಳಿಯದ ಅನಾಗರಿಕ ರಾಜಕಾರಣಿ ತೇಜಸ್ವಿಸೂರ್ಯ ಎಂದು ಬಹಿರಂಗವಾಗಿದೆ ಎಂದರು.
ಸಚಿವ ಸಿಟಿ ರವಿ ಹಾಗೂ ಶಾಸಕರಾದ ರೇಣುಕಾಚಾರ್ಯ ಮತ್ತು ಪಿ ರಾಜೀವ್ ಹಾಗೂ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿನಾಕಾರಣ ಪಾಕಿಸ್ತಾನದ ಹಾಗೂ ಭಯೋತ್ಪಾದ ಕರ ಹೆಸರನ್ನು ಪ್ರಸ್ತಾಪಿಸಿ ದೇಶದ ಜನರ ಭಾವನೆಯನ್ನು ಕಲಿಸುತ್ತಿದ್ದಾರೆ. ಇವರ ಹೇಳಿಕೆ ಸಮಾಜದ ಶಾಂತಿಗೆ ಭಂಗ ತರುವಂತದ್ದಾಗಿದೆ ಶಾಂತಿ ಕದಡುವ ಹೇಳಿಕೆಯನ್ನು ನೀಡಿ, ಕೋಮುಭಾವನೆ ಕೆರಳಿಸಿ ಸಮಾಜದ ಸ್ವಾಸ್ಥ್ಯವನ್ನು ಇವರು ಹಾಳುಗೆಡವುತ್ತಿದ್ದಾರೆ. ಇವರ ಹೇಳಿಕೆ ಹಾಗೂ ವರ್ತನೆಯನ್ನು ಖಂಡಿಸಿ ಇಂದು ನಾವು ಬಿಜೆಪಿಯ ಪಂಚರ್ ಅಂಗಡಿ ತೆರೆದು ವಿನೂತನವಾಗಿ ಪ್ರತಿಭಟನೆ ನಡೆಸಿದ್ದೇವೆ ಎಂದರು
Advertisement