ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆ ಬಂಡಿಪುರ ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಸೇರಿದಂತೆ 80 ಕಡೆ ಬೆಂಕಿ ಅನಾಹುತ ಸಂಭವಿಸಲಿದೆ ಎಂಬ ಮೂನ್ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಅಗ್ನಿ ಶಾಮಕ ಯಂತ್ರಗಳನ್ನು ಸಿದ್ಧಪಡಿಸಿಕೊಂಡಿತ್ತು ಎಂದು ಹೇಳಲಾಗಿದೆ. ಅರಣ್ಯ ಮತ್ತು ಅಗ್ನಿಶಾಮಕ ದಳದ ನೂರಾರು ಅಧಿಕಾರಿಗಳು ಸ್ಥಳಿದಲ್ಲಿ ಬೀಡು ಬಿಟ್ಟು ಸ್ಥಳೀಯ ಜನರ ಸಹಕಾರದಿಂದ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ. ಮೈಸೂರು, ಚಾಮರಾಜ ನಗರ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಸ್ವಯಂ ಸೇವಕರು ಬೆಂಕಿ ನಂದಿಸುವ ಕಾರ್ಯಕ್ಕೆ ಸಾಥ ಕೊಟ್ಟಿದ್ದಾರೆ. ಈ ಕಾರ್ಯಕ್ಕೆ ಬೆಂಬಲ ನೀಡಿ ಬರುವ ಸ್ವಯಂ ಸೇವಕರು ತಮ್ಮ ಜೊತೆಗೆ ನೀರು, ಮಜ್ಜಿಗೆ, ತಂಪು ಪಾನಿಯಗಳನ್ನು ಜೊತೆಯಲ್ಲಿ ತರಬೇಕು. ಹೆಚ್ಚುತ್ತಿರುವ ಬಿಸಿಲಿನ ತಾಪ ಹಾಗೂ ಬೆಂಕಿಯ ತಾಪದಿಂದ ಬಾಯಾರಿಕೆ ತಣಿಸಲು ಸ್ವಯಂ ಸೇವಕರು ನೀರು ಇಲ್ಲವೇ ತಂಪುಪಾನಿಯದ ಜತೆ ಬರಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ ಮನವಿ ಮಾಡಿಕೊಂಡಿದ್ದಾರೆ.