ಕಾರವಾರ: ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಭಾರತ್ ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಕುಸಿದು ಬಿದ್ದು ಸಾವಿಗೀಡಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ನಡೆದಿದೆ.
ಮುಂಡಗೋಡು ತಾಲೂಕಿನ ಶಿಡ್ಲಗುಂಡಿ ಗ್ರಾಮದ ಶಾಂತಾ ಬಸವಣ್ಣೆಪ್ಪ ಚಕ್ರಸಾಲಿ (57) ಎಂಬಾಕೆ ಮೃತರಾಗಿದ್ದಾರೆ. ಇವರು ಮುಂಡಗೋಡ ತಾಲೂಕು ಪಂಚಾಯತ್ ಎದುರು ಪ್ರತಿಭಟನೆಯಲ್ಲಿ ನಿರತವಾಗಿದ್ದಾಗ ಹಠಾತ್ತನೆ ಕುಸಿದು ಬಿದ್ದಿದ್ದಾರೆ.
ಕುಸಿದು ಬಿದ್ದ ಶಾಂತಾ ಅವರನ್ನು ತಕ್ಷಣವೇ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲ ನೀಡದ ಕಾರಣ ಅವರು ಮರಣಿಸಿದ್ದಾರೆ.
ವಿಷಯ ತಿಳಿದ ಆಶಾ ಕಾರ್ಯಕರ್ತೆಯರು ಆಸ್ಪತ್ರೆ ಎದುರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಶಿವಾನಂದ ಚಲವಾದಿ ಸಹ ಭೇಟಿ ನೀಡಿ ಪರಿಶೀಲನೆ ನಡೆಇಸಿದರು.