ಕೋಲಾರ: ಪತಿಯ ಅಕ್ರಮ ಸಂಬಂಧ, ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರದ ತಂತಾರ್ಲಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಮಕ್ಕಳಿಬ್ಬರು ಸಾವನ್ನಪ್ಪಿದ್ದರೆ ತಾಯಿ ಸ್ಥಿತಿ ಗಂಭೀರವಾಗಿದೆ.
ಕುಮಾರ್(3) ಹಾಗೂ ಮಧು(5) ಎಂಬ ಇಬ್ಬರು ಮಕ್ಕಳಿಗೆ ವಿಷವುಣಿಸಿದ ತಾಯಿ ರಾಧಮ್ಮ(28) ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಆದರೆ ಮಕ್ಕಳು ಮೃತಪಟ್ಟಿದ್ದರೆ ರಾಧಮ್ಮನ ಸ್ಥಿತಿ ಮಾತ್ರ ಚಿಂತಾಜನಕವಾಗಿದ್ದು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಕೃಷ್ಣಪ್ಪನ ಪತ್ನಿಯಾಗಿದ್ದ ರಾಧಮ್ಮನಿಗೆ ಪತಿಯ ಅಕ್ರಮ ಸಂಬಂಧದ ಸುಳಿವಿತ್ತು.ಅನೇಕ ಬಾರಿ ಈ ಸಂಬಂಧದಿಂದ ದೂರವಾಗಲು ಪತಿಯನ್ನು ಕೇಳಿದರೂ ಆತ ಅದಕ್ಕೊಪ್ಪದೆ ಹೋದಾಗ ಜೀವನದಲ್ಲಿ ಬೇಸತ್ತು ಈ ಕೃತ್ಯಕ್ಕೆ ಮುಂದಾಗಿದ್ದಾಳೆ.
ಸೋಮವಾರ ಮದ್ಯಾಹ್ಣ ತಂಪುಪಾನೀಯದಲ್ಲಿ ವಿಷ ಹಾಕಿ ಮಕ್ಕಳಿಗೆ ನೀಡಿದ್ದ ರಾಧಮ್ಮ ತಾನು ಸಹ ವಿಷ ಕುಡಿದು ಸಾಯಲು ಮುಂದಾಗಿದ್ದಾಳೆ. ಆದರೆ ಆಕೆಯ ನರಳಾಟ ಕೇಳಿದ ನೆರೆಹೊರೆಯ ಜನರು ಆಕೆ ಹಾಗೂ ಮಕ್ಕಳನ್ನು ಕೋಲಾರ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಮಾರ್ಗ ಮದ್ಯದಲ್ಲಿ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ.
ಘಟನೆ ಮಾಹಿತಿ ಪಡೆದ ಶ್ರೀನಿವಾಸಪುರ ಪೋಲೀಸರು ಸ್ಥಳಕ್ಕಾಗಮಿಸಿ ರಾಧಮ್ಮನ ಪತಿ ಕೃಷ್ಣಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.