ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ವಾಸಿಸುತ್ತಿರುವ ಬನಶಂಕರಿಯ ಬಾಡಿಗೆ ಮನೆಯನ್ನು ತೆರವುಗೊಳಿಸಲು ಮೇ ಅಂತ್ಯದವರೆಗೆ ಗಡುವು ವಿಸ್ತರಿಸಿ ಹೈಕೋರ್ಟ್ ಆದೇಶ ನೀಡಿದೆ.
ಮನೆ ತೆರವುಗೊಳಿಸಲು ಆರು ತಿಂಗಳ ಕಾಲಾವಕಾಶ ಕೋರಿ ಯಶ್ ತಾಯಿ ಪುಷ್ಪಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ಎರಡು ತಿಂಗಳ ಕಾಲಾವಕಾಶ ನೀಡಿತು.
ಬನಶಂಕರಿಯ ಮೂರನೇ ಹಂತದ ಮೂರನೇ ಬ್ಲಾಕ್ ನ 6ನೇ ಅಡ್ಡರಸ್ತೆಯಲ್ಲಿರುವ ಮನೆಯಲ್ಲಿ ಯಶ್ ಅವರು ಬಾಡಿಗೆಗಿದ್ದಾರೆ. ಆದರೆ, ಅವರು ಸರಿಯಾಗಿ ಬಾಡಿಗೆ ನೀಡುತ್ತಿಲ್ಲ. ಹಲವು ತಿಂಗಳ ಬಾಡಿಗೆ ಬಾಕಿ ಇರಿಸಿಕೊಂಡಿದ್ದಾರೆ ಎಂದು ಮನೆ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್, ಮನೆ ಮಾಲೀಕರಿಗೆ ಬಾಕಿ ಇರುವ 23 ಲಕ್ಷ ರೂ. ಪಾವತಿಸಿ 2019ರ ಮಾರ್ಚ್ ಒಳಗೆ ಮನೆ ತೆರವುಗೊಳಿಸುವಂತೆ ಸೂಚಿಸಿತ್ತು. ಈಗ ಅ ಅವಧಿ ವಿಸ್ತರಣೆ ಕೋರಿ ಪುಷ್ಪಾ ಅರ್ಜಿ ಸಲ್ಲಿಸಿದ್ದಾರೆ.
ಹಾಸನದಲ್ಲಿ ಮನೆ ನಿರ್ಮಿಸುತ್ತಿದ್ದು, ಆರು ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುತ್ತದೆ. ಅಲ್ಲಿಯವರೆಗೆ ಇದೇ ಮನೆಯಲ್ಲಿ ಮುಂದುವರಿಯಲು ಅನುಮತಿ ನೀಡುವಂತೆ ಅವರು ಕೋರಿದ್ದರು. ಇದನ್ನೊಪ್ಪದ ನ್ಯಾಯಪೀಠ, ಎರಡು ತಿಂಗಳಲ್ಲಿ ಮನೆ ತೆರವುಗೊಳಿಸುವಂತೆ ಸೂಚಿಸಿದೆ.