ಈಜುಪಟುಗಳ ಕನಸಿಗೆ ನೀರೆರೆದು ಬೆಳೆಸಿದ್ದ ಉದ್ಯಮಿ ಜಗದಾಳೆ ನಿಧನ

ಬಸವನಗುಡಿ ಈಜುಗಾರರ ಒಕ್ಕೂಟದ ಅಧ್ಯಕ್ಷ ಆರ್‌ ನೀಲಕಂಠ ರಾವ್‌ ಜಗದಾಳೆ (67) ಅನಾರೋಗ್ಯದಿಂದ ಗುರುವಾರ ನಿಧನರಾದರು.
ನೀಲಕಂಠ ರಾವ್‌ ಜಗದಾಳೆ
ನೀಲಕಂಠ ರಾವ್‌ ಜಗದಾಳೆ
ಬೆಂಗಳೂರು: ಬಸವನಗುಡಿ ಈಜುಗಾರರ ಒಕ್ಕೂಟದ ಅಧ್ಯಕ್ಷ ಆರ್‌ ನೀಲಕಂಠ ರಾವ್‌ ಜಗದಾಳೆ (67) ಅನಾರೋಗ್ಯದಿಂದ ಗುರುವಾರ ನಿಧನರಾದರು.
ಕಳೆದ 5 ದಶಕಗಳಿಂದ ಭಾರತೀಯ ಈಜುಪಟುಗಳಿಗೆ ಬೆಂಬಲ ನೀಡುತ್ತಿದ್ದ ಅವರು, ಜನಪ್ರಿಯ ಡಿಸ್ಟಿಲರಿಸ್‌ ಉತ್ಪಾದಕ ಜಗದಾಳೆ ಸಮೂಹದ ಮಾಲೀಕರಾಗಿದ್ದರು. ಕರ್ನಾಟಕದಲ್ಲಿ ಈಜು ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದರು. 3 ದಶಕಗಳಿಗೂ ಅಧಿಕ ಕಾಲ ಅವರು ಈಜುಗಾರರ ಒಕ್ಕೂಟವನ್ನು ಮುನ್ನಡೆಸಿದ್ದರು. ಅವರು ಬೆಂಗಳೂರಿನ ಬಸವಂಗುಡಿ ಅಕ್ವಾಟಿಕ್ ಸೆಂಟರ್ (ಬಿಎಸಿ) ಯನ್ನು ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ದೇಶದ ಹೆಸರಾಂತ ಈಜು ಕೇಂದ್ರಗಳಲ್ಲಿ ಒಂದಾಗುವಂತೆ ಮಾಡಿದ್ದರು. 
 ಅವರು ಹಲವಾರು ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳನ್ನು ಬಸವನಗುಡಿಯಲ್ಲಿನ ಬಿಎಸಿಗೆ ಕರೆದು ತರುತ್ತಿದ್ದರು. ಈಜು ತರಬೇತಿ ನಡೆಸಿ ಭವಿಷ್ಯದ ಚಾಂಪಿಯನ್ ಗಳನ್ನು ರೂಪಿಸಿದ್ದರು.ಅಲ್ಲದೆ ಜಗದಾಳೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಹಾಯ ಮಾಡಿದ್ದರು. ರಸ್ವತಿಪುರಂನ ಯುಒಎಂನ ಈಜುಕೊಳದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ್ದರು.
ಈಜು ಕ್ರೀಡೆ ಉತ್ತೇಜನಕ್ಕಾಗಿ ಕರ್ನಾಟಕ ಒಲಿಂಪಿಕ್‌ ಒಕ್ಕೂಟದ ಪ್ರಶಸ್ತಿಯನ್ನು ಪಡೆದಿದ್ದರು. ಈ ಸಾಧನೆಗಾಗಿ ಕೆಂಪೆಗೌಡ ಪ್ರಶಸ್ತಿ ಕೂಡ ಅವರಿಗೆ ಲಭಿಸಿತ್ತು.
ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಕೆಒಎ ಅಧ್ಯಕ್ಷ ಮತ್ತು ಎಂಎಲ್‌ಸಿ ಕೆ.ಗೋವಿಂದ ರಾಜು, ಬಸವನಗುಡಿ ಈಜುಗಾರರ ಒಕ್ಕೂಟದ ಸದಸ್ಯರು ಸೇರಿದಂತೆ ಹಲ ಗಣ್ಯರು ಜಗದಾಳೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com