ಕನ್ನಡ ಧ್ವಜ ಹಾರಾಟಕ್ಕೆ ಅನುಮತಿ ನಕಾರ: ರಾಜ್ಯೋತ್ಸವ ಪ್ರಶಸ್ತಿ ತಿರಸ್ಕರಿಸಿದ ಬಾಲಕ!
ಶೃಂಗೇರಿ: ಕನ್ನಡ ರಾಜ್ಯೋತ್ಸವದಂದು ಕನ್ನಡ ಧ್ವಜ ಹಾರಾಟಕ್ಕೆ ಅನುಮತಿ ನೀಡದ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಬಾಲಕನೊಬ್ಬ ತನಗೊಲಿದ ರಾಜ್ಯೋತ್ಸವ ಪುರಸ್ಕಾರವನ್ನು ತಿರಸ್ಕರಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ನಡೆದಿದೆ.
ರಾಜ್ಯೋತ್ಸವದಂದ್ತ್ ರಾಷ್ಟ್ರಧ್ವಜ ಹಾರಿಸಿ ಎಂದು ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರದ ನೀತಿಗೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.ಈ ನಡುವೆ ಶೃಂಗೇರಿಯ ಬಾಲಕನೊಬ್ಬ ತನಗೆ ದೊರಕಿದ್ದ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸಿ ಕನ್ನಡ ಅಭಿಮಾನ ಮೆರೆದಿದ್ದಾನೆ.
ಶೃಂಗೇರಿಯ ಬಿಜಿಎಸ್ ಶಾಲೆಯ ವಿದ್ಯಾರ್ಥಿ ಸಂಕೀರ್ತ್ ಕರುವಾನೆ ಎಂಬುವವನೇ ಈ ಬಗೆಯಲ್ಲಿ ಪ್ರಶಸ್ತಿ ತಿರಸ್ಕರಿಸಿದ ಬಾಲಕ. ಈತ ಕಳೆದ ಸಾಲಿನಲ್ಲಿ ನಡೆದ 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ಭಾಷೆ ವಿಷಯದಲ್ಲಿ 125ಕ್ಕೆ 125 ಂಕ ಪಡೆದಿದ್ದಕ್ಕೆ ಶೃಂಗೇರಿ ತಾಲೂಕು ಆಡಳಿತ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಅವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲು ತೀರ್ಮಾನಿಸಿದೆ. ಆದರೆ ಸರ್ಕಾರ ಕನ್ನಡ ಧ್ವಜದ ಕುರಿತು ಅವಗಣನೆ ಮಾಡಿದ ಹಿನ್ನೆಲೆಯಲ್ಲಿ ಬಾಲಕ ಹಾಗೂ ಅವನ ಹೆತ್ತವರು ಸರ್ಕಾರದ ಈ ಪ್ರಶಸ್ತಿಯನ್ನು ತಿರಸ್ಕರಿಸಿ ಸನ್ಮಾನ ಮಾಡಿಸಿಕೊಳ್ಳಲು ಒಲ್ಲೆ ಎಂದಿದ್ದಾರೆ.
ಈ ಕುರಿತಂತೆ ಸಂಕೀರ್ತ್ ತಂದೆ ನವೀನ್ ಕರುವಾನೆ ಮಾತನಾಡಿ "ಮಗನಿಗೆ ಹೆಚ್ಚು ಅಂಕ ಗಳಿಸಲು ಸಹಕರಿಸಿದ ಶಿಕ್ಷಕರು ಹಾಗೂ ಶಾಲಾ ಆಡಳಿತಕ್ಕೆ ನಾನು ಧನ್ಯವಾದ ಹೇಳುವೆ. ಆದರೆ ರಾಜ್ಯೋತ್ಸವದಂದು ಕನ್ನಡ ಧ್ವಜ ಹಾರಾಟ ನಡೆಸದಂತೆ ಆದೇಶಿಸಿದ ರಾಜ್ಯ ಸರ್ಕಾರ ನೀಡುವ ಪ್ರಶಸ್ತಿ, ಮಾಡುವ ಸನ್ಮಾನ ನಮಗೆ ಬೇಡ. " ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ