ದೇಶ ಕಾಯೋ ಯೋಧ ಹಾಗೂ ಆತನ ಕುಟುಂಬದ ಮೇಲೆ ಬಿಜೆಪಿ ಶಾಸಕ ಆಚಾರ್ ಬೆಂಬಲಿಗರ ಹಲ್ಲೆ

ಮನೆ ನಿರ್ಮಾಣ ವಿಚಾರವಾಗಿ ಬಿಜೆಪಿ ಶಾಸಕನ ಬೆಂಬಲಿಗರು ಯೋಧ ಹಾಗೂ ಆತನ ಕುಟುಂಬದವರ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಹಲ್ಲೆ ದೃಶ್ಯ
ಹಲ್ಲೆ ದೃಶ್ಯ

ಕೊಪ್ಪಳ: ಮನೆ ನಿರ್ಮಾಣ ವಿಚಾರವಾಗಿ ಬಿಜೆಪಿ ಶಾಸಕನ ಬೆಂಬಲಿಗರು ಯೋಧ ಹಾಗೂ ಆತನ ಕುಟುಂಬದವರ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. 

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಯೋಧನ ಹಾಗೂ ಯೋಧನ ಕುಟುಂಬದವರ ಮೇಲೆ ಬಿಜೆಪಿ ಮುಖಂಡರಾದ ಶರಣಪ್ಪ ಕಳಸಪ್ಪನವರ್ ಹಾಗೂ ಸ್ಥಳೀಯ ಗ್ರಾಪಂ ಸದಸ್ಯ ಗೂಳಪ್ಪ ದಿಂಡೂರ್ ಕಟ್ಟಿಗೆ, ಬ್ಲೆಡ್‌ನಿಂದ ನಡುರಸ್ತೆಯಲ್ಲಿ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಅಂತೆ. ಹಲ್ಲೆಯಿಂದಾಗಿ ಯೋಧ ಬಸವರಾಜ‌ ಹಾಗೂ ಅವರ ತಂದೆ ಕಳನಗೌಡ ಅವರು ರಸ್ತೆಯಲ್ಲಿ ಬಿದ್ದು ಗೋಳಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. 

ಇನ್ನು ಶರಣಪ್ಪ ಹಾಗೂ ಗೂಳಪ್ಪ ದಿಂಡೂರು ಯೋಧನಿಗೆ ಧಮ್ಕಿ ಹಾಕಿದ್ದು, ನಾವು ಶಾಸಕರ ಜೊತೆ ಇರ್ತೀವಿ. ನಮ್ಮನ್ನು ಯಾರೂ ಏನೂ‌ ಮಾಡೋಕೆ ಆಗೋದಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎಂದು  ಆರೋಪಿಸಲಾಗಿದೆ.‌ ಹಲ್ಲೆಗೊಳಗಾದ ಯೋಧನ ಕುಟುಂಬ ದೂರು ನೀಡಿದರೂ ಕುಕನೂರು ಪೊಲೀಸರು ಯಾವುದೇ‌ ಕ್ರಮ ಕೈಗೊಂಡಿಲ್ಲ ಎಂದು ಯೋಧನ ಕುಟುಂಬಸ್ಥರು ಆರೋಪಿಸಿದ್ದಾರೆ. 

ಸದ್ಯ ಯೋಧನ ಇಡೀ ಕುಟುಂಬ ಇದೀಗ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಶರಣಪ್ಪ ಕಳಸಪ್ಪನವರ್ ಹಾಗೂ ಯೋಧ ಬಸವರಾಜ ಕುಟುಂಬಗಳ ನಡುವೆ ಮೊದಲಿನಿಂದಲೂ ದ್ವೇಷವಿದ್ದು, ಆಗಾಗ ಜಗಳ ನಡೆಯುತ್ತಲೇ ಇತ್ತಂತೆ. ಶುಕ್ರವಾರ ಬಸವರಾಜ ಕುಟುಂಬದವರು ಪೊಲೀಸ್ ಠಾಣೆಗೆ ಹೋದರೂ ಪ್ರಯೋಜನವಾಗಿಲ್ಲ. ರವಿವಾರ ಸಂಜೆ ಮನೆ ನಿರ್ಮಿಸಿಕೊಳ್ಳುತ್ತಿರುವ ಯೋಧನ ಕುಟುಂಬದವರೊಂದಿಗೆ ಏಕಾಏಕಿ ತಗಾದೆ ಶುರು ಮಾಡಿದ ಶರಣಪ್ಪ, ನಮ್ಮ‌ ವಿರುದ್ಧವೇ ದೂರು ಕೊಡ್ತಿರಾ ಅಂತ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ್ದಾನೆ. ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು ಎಸ್ಪಿ ಪ್ರಕರಣದ ತನಿಖೆಗಾಗಿ ತಂಡ ರಚಿಸಿದ್ದಾರೆ.

ವರದಿ: ಬಸವರಾಜ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com