ಬಾಗಲಕೋಟೆ: ಪ್ರವಾಹ ಸಂಕಷ್ಟದಲ್ಲಿ ಜನತೆ, ಜಿಲ್ಲೆಯತ್ತ ಸುಳಿಯದ ಡಿಸಿಎಂ ಕಾರಜೋಳ

ಜಿಲ್ಲೆಯ ಉಸ್ತುವಾರಿಗಳೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಜಿಲ್ಲೆಯನ್ನು ಮರೆತು ಬಿಟ್ಟಿದ್ದಾರೆ. ಜಿಲ್ಲೆಯ ಕೃಷ್ಣ, ಮಲಪ್ರಭ ಮತ್ತು ಘಟಪ್ರಭ ನದಿಯಲ್ಲಿ ಪ್ರವಾಹ ಉಂಟಾಗುವ ಜತೆಗೆ ಸತತವಾಗಿ ಸುರಿಯುತ್ತಿರುವ....
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ

ಬಾಗಲಕೋಟೆ: ಜಿಲ್ಲೆಯ ಉಸ್ತುವಾರಿಗಳೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಜಿಲ್ಲೆಯನ್ನು ಮರೆತು ಬಿಟ್ಟಿದ್ದಾರೆ. ಜಿಲ್ಲೆಯ ಕೃಷ್ಣ, ಮಲಪ್ರಭ ಮತ್ತು ಘಟಪ್ರಭ ನದಿಯಲ್ಲಿ ಪ್ರವಾಹ ಉಂಟಾಗುವ ಜತೆಗೆ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಜನತೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸಂಕಷ್ಟದಲ್ಲಿರುವ ಜನತೆಗೆ ಧೈರ್ಯ ಹೇಳಬೇಕಾದ ಉಸ್ತುವಾರಿ ಸಚಿವರು ಜಿಲ್ಲೆಯತ್ತ ಸುಳಿಯುತ್ತಲೇ ಇಲ್ಲ.

ಶಾಲಾ ಬಾಲಕಿಯೊಬ್ಬಳು ಪ್ರವಾಹದ ನೀರಲ್ಲೇ ನಿಂತು ರಸ್ತೆಗಳ ಸುಧಾರಣೆಗೆ ಡಿಸಿಎಂ ಅವರನ್ನು ಒತ್ತಾಯಿಸಿ ಬರೆದ ಪತ್ರ ಓದಿದ್ದಾಳೆ. ಇದು ಯಾರೋ ಬರೆದು ಓದಿಸಿದ್ದು ಎನ್ನುವ ಉಢಾಪೆ ಉತ್ತರವನ್ನು ಡಿಸಿಎಂ ನೀಡಿದ್ದು, ಜನತೆಯಲ್ಲಿ ಬೇಸರವನ್ನುಂಟು ಮಾಡಿದೆ.

ಡಿಸಿಎಂ ಗೋವಿಂದ ಕಾರಜೋಳರು ಪ್ರತಿನಿಧಿಸುತ್ತಿರುವ ಮುಧೋಳ ಮೀಸಲು ಕ್ಷೇತ್ರದಲ್ಲಿ ಸತತ ಮಳೆ ಮತ್ತು ಘಟಪ್ರಭ ನದಿಯಲ್ಲಿ ಪ್ರವಾಹ ಬಂದು ಗ್ರಾಮಗಳಲ್ಲಿ ಮತ್ತು ಜಮೀನುಗಳಿಗೆ ನುಗ್ಗಿದೆ. ರಸ್ತೆ, ಸೇತುವೆಗಳ ಸಂಚಾರ ಸ್ಥಗಿತಗೊಂಡಿದೆ. ಹಾಗೆ ಮಲಪ್ರಭಾ ನದಿಯೂ ಉಕ್ಕಿ ಹರಿಯುತ್ತಿದ್ದು, ಮಂಗಳವಾರ ಬೆಳಗಿನಿಂದಲೇ ನದಿ ತೀರದ ಗ್ರಾಮಗಳಲ್ಲಿ ನೀರು ನುಗ್ಗುತ್ತಿದೆ. ಬಾದಾಮಿ ತಾಲೂಕು ಶಿರಬಡಗಿಯಲ್ಲಿ ಹೊಲಕ್ಕೆ ಹೋಗುತ್ತಿದ್ದ ವ್ಯಕ್ತಿಯೊಬ್ಬ ನದಿಗೆ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ.

ಪ್ರವಾಹದಿಂದ ಹುಬ್ಬಳ್ಳಿ-ವಿಜಯಪುರ ಸಂಪರ್ಕ ಕಲ್ಪಿಸುವ ಹೆದ್ದಾರಿ ರಸ್ತೆ ಗೋವನಕೊಪ್ಪದ ಬಳಿ ಬಂದ್ ಆಗಿದೆ. ಬಾದಾಮಿ- ಗದಗ ಸಂಪರ್ಕ ಕಲ್ಪಿಸುವ ಬಾಗಲಕೋಟೆ-ಗದಗ ರಸ್ತೆ ಕೂಡ ಚೋಳಚಗುಡ್ಡದ ಬಳಿ ಬಂದ್ ಆಗಿದ್ದು, ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಪ್ರವಾಹದ ಅಬ್ಬರ ಜೋರಾಗಿದ್ದು, ಮಲಪ್ರಭ, ಘಟಪ್ರಭ ಮತ್ತು ಕೃಷ್ಣಾ ನದಿ ತೀರದ ಜನತೆಗೆ ಮತ್ತೊಮ್ಮೆ ಪ್ರವಾಹ ಸಂಕಷ್ಟ ಎದುರಾಗಿದೆ. ಇದರಿಂದಾಗಿ ಜನತೆ ಬದುಕು ಮತ್ತೊಮ್ಮೆ ಹದಗೆಟ್ಟು ಹೋಗಿದೆ. ಮಲಪ್ರಭಾ ನದಿಯಲ್ಲಿ ಉಂಟಾಗಿರುವ ಪ್ರವಾಹದಿಂದ ಗ್ರಾಮಗಳಿಗೆ ಮಂಗಳವಾರ ಬೆಳಗಿನಿಂದ ನೀರು ನುಗ್ಗಲಾರಂಭಿಸಿದೆ.

ಈಗಾಗಲೇ ಕರ್ಲಕೊಪ್ಪ, ಬೀರನೂರ, ಗೋವನಕೊಪ್ಪ ಸೇರಿದಂತೆ ಚೊಳಚಗುಡ್ದದವರೆಗೂ ನದಿ ತೀರದ ಗ್ರಾಮಗಳಲ್ಲಿ ನೀರು ನುಗ್ಗಿದೆ. ಇತ್ತ ಶಿರಬಡಗಿ, ಕಮತಗಿಯಲ್ಲೂ ನೀರು ಒಳಹೊಕ್ಕಿದೆ.

ಘಟಪ್ರಭ ನದಿಯಲ್ಲಿ ಉಂಟಾಗಿರು ಪ್ರವಾಹದಿಂದ ಮುಧೋಳ ತಾಲೂಕಿನ ಅನೇಕ ಗ್ರಾಮ ಮತ್ತು ಜಮೀನುಗಳಿಗೆ ನೀರು ನುಗ್ಗಿದೆ. 

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಲೇ ಇದೆ. ಪರಿಣಮವಾಗಿ ತುಂಬಿದ ಆಲಮಟ್ಟಿ ಜಲಾಶಯದಿಂದ 2 ಲಕ್ಷಕ್ಕೂ ಅಧಿಕ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದಾಗಿ ಜಲಾಶಯದ ಕೆಳಭಾಗದ ಗ್ರಾಮಗಳಲ್ಲಿ ಪ್ರವಾಹ ಕಾಣಿಸಿಕೊಂಡಿದೆ.

ಹೀಗೆ ಜಿಲ್ಲೆಯಲ್ಲಿ ಇಷ್ಟೆಲ್ಲ ಪ್ರವಾಹ ಸ್ಥಿತಿ ಎದುರಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಜಿಲ್ಲೆಯತ್ತ ಸುಳಿಯುತ್ತಲೇ ಇಲ್ಲ. ಅಧಿಕಾರಿಗಳದ್ದೇ ಪಾರುಪತ್ಯ. ಪ್ರವಾಹ ಸಂತ್ರಸ್ತರ ಗೋಳು ಕೇಳುವವರಾರು ಎನ್ನುವ ಪ್ರಶ್ನೆ ಎದುರಾಗಿದೆ.

ಏತನ್ಮಧ್ಯೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲಿಗರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ರದ್ದುಗೊಳಿಸಿ, ಮಲಪ್ರಭಾ ನದಿ ತೀರದ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸುವ ಜತೆಗೆ ಸಂತ್ರಸ್ತರಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸ ನಡೆಸಿದರು. ಪ್ರವಾಹ ಪರಿಸ್ಥಿತಿ ಕುರಿತು ಸರ್ಕಾರ ಗಮನ ಸೆಳೆಯುವ ಭರವಸೆ ನೀಡಿದರು.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com