ಬೆಂಗಳೂರು: ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್ ಮದರಸಾಗಳಿಗೆ ಕೋಟೊಗಟ್ಟಲೆ ಹಣ ಕೊಟ್ಟಿರುವುದನ್ನು ಸ್ವತಃ ಮನ್ಸೂರ್ ಅಲಿ ಖಾನ್ ಇ.ಡಿ ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ.
ಸ್ವಯಂ ಪ್ರೇರಿತವಾಗಿ ನೀಡಿರುವ ಹೇಳಿಕೆಯ ಪ್ರಕಾರ ಮನ್ಸೂರ್ ಅಲಿ ಖಾನ್ ಐಎಂಎ ಚಾರಿಟಬಲ್ ಸೊಸೈಟಿಯಿಂದ ಉತ್ತರ ಪ್ರದೇಶದಲ್ಲಿ ಮುಫ್ತಿಯೊಬ್ಬರಿಗೆ ಕೋಟ್ಯಂತರ ರೂಪಯಿ ಬೆಲೆ ಬಾಳುವ ಕಟ್ಟಡವನ್ನು ಖರೀದಿಸಲು ಹಣ ನೀಡಿದ್ದಾರೆ.
ಅದಷ್ಟೇ ಅಲ್ಲದೇ ಮದರಸಾ ಹಾಗೂ ಟ್ರಸ್ಟ್ ಗಳಿಗೂ ಕೋಟ್ಯಂತರ ರೂಪಾಯಿ ನೀಡಿರುವುದಾಗಿ ಹೇಳಿದ್ದಾರೆ. ಹಗರಣದ ಸಂಬಂಧ ಉತ್ತರ ಪ್ರದೇಶದ ಮಸೀದಿಯ ಮುಫ್ತಿಯಾಗಿರುವ ಮೌಲಾನ ಮುಫ್ತಿ ಶುವಾಯಿಬ್ಉಲ್ಲಾ ಖಾನ್ ಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಬಂದ ಬೆನ್ನಲ್ಲೇ ಮುಫ್ತಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ನಿರೀಕ್ಷಣಾ ಜಾಮೀನಿಗೆ ಇಡಿ ಆಕ್ಷೇಪ ಸಲ್ಲಿಸಿದ ಬೆನ್ನಲ್ಲೇ ಮನ್ಸೂರ್ ಅಲಿ ಖಾನ್ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಐಎಂಎ ಚಾರಿಟಬಲ್ ಸೊಸೈಟಿಯಿಂದ 21.5 ಕೋಟಿ ರೂಪಾಯಿಯನ್ನು ಕಟ್ಟಡ ನಿರ್ಮಾಣಕ್ಕಾಗಿ ಮುಫ್ತಿಗೆ ನೀಡಿರುವುದಾಗಿ ಮನ್ಸೂರ್ ಅಲಿ ಖಾನ್ ಹೇಳಿರುವುದರ ಬಗ್ಗೆ ಇಡಿ ಮಾಹಿತಿ ನೀಡಿದೆ.
ದಿಯೋಬಂದ್, ಶರಹಾಪುರದಲ್ಲಿ 2.5 ಕೋಟಿಯ 2,600 ಚದರ ಅಡಿಯ ಸ್ಥಿರಾಸ್ತಿಯನ್ನು ಕೂಡ ಮುಫ್ತಿಗೆ ಕೊಡಿಸಿರುವುದಾಗಿ ಮನ್ಸೂರ್ ಹೇಳಿಕೆ ನೀಡಿದ್ದಾರೆ. 2.5 ಕೋಟಿ ಪೈಕಿ 60 ಲಕ್ಷ ರೂಪಾಯಿಯನ್ನು ಐಎಂಎ ಚಾರಿಟಬಲ್ ಸೊಸೈಟಿಯಿಂದ ಮುಫ್ತಿ ಫಾಹಿಮುದ್ದೀನ್ ಅವರ ಖಾತೆಗೆ ವರ್ಗಾವಣೆ ಮಾಡಲಾಗಿದ್ದು ಉಳಿದ ಮೊತ್ತವನ್ನು ನಗದಿನಲ್ಲಿ ನೀಡಲಾಗಿದೆ. ಇನ್ನು 1.76 ಕೋಟಿ ರೂಪಾಯಿ ಮೌಲ್ಯದ ಇಸ್ಲಾಮಿಕ್ ಪುಸ್ತಕಗಳನ್ನು ಮನ್ಸೂರ್ ಅಲಿ ಖಾನ್ ಮುಫ್ತಿಗೆ ನೀಡಿದ್ದಾರೆ, ಇದಲ್ಲದೇ 50 ಲಕ್ಷರೂಪಾಯಿಯನ್ನು ಉತ್ತರ ಪ್ರದೇಶದ ಮಕ್ತಬಾ ಮಸಿಯುಲುಮೈತ್ ಎಂಬುವವರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಮನ್ಸೂರ್ ಅಲಿ ಖಾನ್ ತಮ್ಮ ಹೆಸರಿನಲ್ಲಿ ಖರೀದಿಸಿದ್ದ ಬುಲೇರೊ ಹಾಗೂ 20 ದ್ವಿಚಕ್ರ ವಾಹನಗಳನ್ನು ಮದರಸಾದಲ್ಲಿ ಬಳಕೆ ಮಾಡಲಾಗುತ್ತಿದೆ. ಇವೆಲ್ಲದರ ಹೊರತಾಗಿ 50 ಲಕ್ಷ ರೂಪಾಯಿಯನ್ನು 2018 ರಲ್ಲಿ ಕೈ ಸಾಲ ನೀಡಲಾಗಿತ್ತು ಎಂಬ ಮಾಹಿತಿ ಇಡಿ ತನಿಖೆ ವೇಳೆ ಬಹಿರಂಗಗೊಂಡಿದೆ.
Advertisement