ಐಎಂಎ ಪ್ರಕರಣ: ಒಂದು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಸಿಬಿಐ
ಬೆಂಗಳೂರು: ಕಳೆದ ವಾರ ಬಹುಕೋಟಿ ಐಎಂಎ ವಂಚನೆ ಪ್ರಕರಣ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಬಿಐ ಅಧಿಕಾರಿಗಳು, ಶನಿವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಪ್ರಾಥಮಿಕ ಹಂತದ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.
ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಐಎಂಎ ವಂಚನೆ ಬಗ್ಗೆ ಎಫ್ಐಆರ್ ದಾಖಲಾಗಿ ಸೆಪ್ಟಂಬರ್ 9ಕ್ಕೆ 90 ದಿನ ಪೂರ್ಣಗೊಳ್ಳಲಿದೆ. 90 ದಿನದ ಒಳಗಾಗಿ ಆರೋಪಪಟ್ಟಿ ಸಲ್ಲಿಸದಿದ್ದರೆ ಆರೋಪಿಗಳಿಗೆ ಜಾಮೀನು ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಆರೋಪ ಪಟ್ಟಿ ಸಲ್ಲಿಕೆಗೆ ಅಲ್ಪಾವಧಿ ಇದ್ದ ಕಾರಣ ಸಿಬಿಐ ಅಧಿಕಾರಿಗಳು, ಈಗಾಗಲೇ ಎಸ್ಐಟಿ ಅಧಿಕಾರಿಗಳು ನಡೆಸಿರುವ ತನಿಖಾ ವರದಿಯನ್ನು ಕ್ರೋಢೀಕರಿಸಿ ಮೊದಲ ಹಂತದ ದೋಷಾರೋಪಪಟ್ಟಿ ಸಲ್ಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವಿಚಾರಣೆಯ ವೇಳೆ ಐಎಂಎ ಕಂಪನಿ ಮಾಲೀಕ ಮನ್ಸೂರ್ ಖಾನ್ 30 ಪುಟಗಳ ಹೇಳಿಕೆ ನೀಡಿದ್ದು. ಹಲವು ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳ ಹಾಗೂ ಉದ್ಯಮಿಗಳ ಹೆಸರು ಪ್ರಸ್ತಾಪಿಸಿದ್ದಾನೆ.
ಐಎಂಎ ಕಂಪನಿಯ 12 ನಿರ್ದೇಶಕರು, ಹಣ ವಸೂಲಿಗೆ ಉತ್ತೇಜನ ನೀಡಿದ ಮೌಲ್ವಿ, ನಾಟಿ ವೈದ್ಯ, ಲಂಚ ಪಡೆದ ಆರೋಪಕ್ಕೆ ತುತ್ತಾದ ಬೆಂಗಳೂರು ನಗರದ ಅಂದಿನ ಜಿಲ್ಲಾಧಿಕಾರಿ ವಿಜಯಶಂಕರ್, ಉಪ ವಿಭಾಗಾಧಿಕಾರಿ ಎಲ್.ಸಿ. ನಾಗರಾಜ್, ಗ್ರಾಮ ಲೆಕ್ಕಿಗ ಮಂಜುನಾಥ್ ಹಾಗೂ ಬಿಡಿಎ ಮುಖ್ಯ ಇಂಜಿನಿಯರ್ ಕುಮಾರ್ ಸೇರಿ 25 ಆರೋಪಿಗಳ ವಿರುದ್ಧ 1 ಸಾವಿರ ಪುಟಗಳ ಚಾರ್ಜ್ಶೀಟ್ ಅನ್ನು ಸಲ್ಲಿಸಲಾಗಿದೆ. 52 ಸಾವಿರ ಹೂಡಿಕೆದಾರರ ದೂರಿನ ಪ್ರತಿಗಳು ಸಹ ಲಗತ್ತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ