ಬೆಂಗಳೂರು: ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನ ಸಭಾ ಕ್ಷೇತ್ರವನ್ನು ತಾಲೂಕಾಗಿ ಘೋಷಣೆ ಮಾಡಲು ಕಂದಾಯ ಇಲಾಖೆಯಿಂದ ವರದಿ ತರಿಸಿಕಕೊಂಡು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ತಿಳಿಸಿದ್ದಾರೆ.
ಇಂದು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ದಾವಣಗೆರೆ ಜಿಲ್ಲೆ ಮಾಯಕೊಂಡ ಕ್ಷೇತ್ರದ ಅಭಿವೃದ್ಧಿ ಕುರಿತಂತೆ ತಮ್ಮನ್ನು ಭೇಟಿಯಾದ ನಿಯೋಗದೊಂದಿಗೆ ವಿವಿಧ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸುತ್ತಾ ಮಾಯಕೊಂಡ ತಾಲ್ಲೂಕು ರಚನೆಯ ಭರವಸೆ ನೀಡಿದರು.
ಹುಂಡೇಕಾರ್ ಸಮಿತಿ, ಗದ್ದಿಗೌಡರ ಸಮಿತಿ ಹಾಗೂ ವಾಸುದೇವರಾವ್ ಸಮಿತಿ ವರದಿಗಳಲ್ಲಿ ಮಾಯಕೊಂಡ ತಾಲ್ಲೂಕು ರಚನೆಗೆ ಶಿಫಾರಸು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಾಯಕೊಂಡ ತಾಲ್ಲೂಕು ರಚನೆಗೆ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸುವಂತೆ ಕಂದಾಯ ಇಲಾಖೆಗೆ ಸೂಚಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಶಾಸ್ತ್ರಿ ಅವರು, ದಾವಣಗೆರೆ ಜಿಲ್ಲೆಯ ಮಾಯಕೊಂಡ ಪರಿಶಿಷ್ಟ ಜಾತಿಗೆ ಮೀಸಲಾದ ವಿಧಾನಸಬಾ ಕ್ಷೇತ್ರದ ಕೇಂದ್ರ ಸ್ಥಾನವಾಗಿದ್ದು, ಅಭಿವೃದ್ಧಿ ಯಲ್ಲಿ ತೀರ ಹಿಂದುಳಿದಿದೆ. ಅಷ್ಟೇ ಅಲ್ಲದೆ ಈ ಕ್ಷೇತ್ರವನ್ನು ತಾಲ್ಲೂಕು ಮಾಡಬೇಕು ಎಂಬುದು ಕ್ಷೇತ್ರದ ಜನರ ಬಹು ದಿನದ ಬೇಡಿಕೆಯಾಗಿದ್ದು, ಇದುವರೆಗು ಯಾವ ಸರ್ಕಾರ ಈಡೇರಿಸಿಲ್ಲ ಹಾಗಾಗಿ ಈ ಸರ್ಕಾರದ ಅವಧಿಯಲ್ಲಾದರು ತಾಲ್ಲೂಕನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯ ಮಾಡಿದರು.
Advertisement