ದಲಿತ ಸಂಸದ ಆನೇಕಲ್ ನಾರಾಯಣಸ್ವಾಮಿಗೆ ಗ್ರಾಮಕ್ಕೆ ನಿಷೇಧ; ಅವಮಾನ ಸಹಿಸಿದ ಚಿತ್ರದುರ್ಗ ಎಂಪಿ

ದಲಿತ ಸಂಸದರನ್ನು ಗ್ರಾಮದೊಳಗೆ ಬಿಡದೇ ಗ್ರಾಮಸ್ಥರು ತಡೆ ಹಾಕಿದ ವಿಚಿತ್ರ ಘಟನೆ ತುಮಕೂರಲ್ಲಿ ನಡೆದಿದೆ. ಚಿತ್ರದುರ್ಗ ಬಿಜೆಪಿ ಸಂಸದ ಆನೇಕಲ್  ನಾರಾಯಣಸ್ವಾಮಿಗೆ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಿರ್ಬಂಧಿಸಿದ ವಿಚಿತ್ರ ಘಟನೆ ನಡೆದಿದೆ.
ಸಂಸದರನ್ನು ತಡೆದ ಗ್ರಾಮಸ್ಥರು
ಸಂಸದರನ್ನು ತಡೆದ ಗ್ರಾಮಸ್ಥರು

ತುಮಕೂರು: ದಲಿತ ಸಂಸದರನ್ನು ಗ್ರಾಮದೊಳಗೆ ಬಿಡದೇ ಗ್ರಾಮಸ್ಥರು ತಡೆ ಹಾಕಿದ ವಿಚಿತ್ರ ಘಟನೆ ತುಮಕೂರಲ್ಲಿ ನಡೆದಿದೆ. ಚಿತ್ರದುರ್ಗ ಬಿಜೆಪಿ ಸಂಸದ ಆನೇಕಲ್  ನಾರಾಯಣಸ್ವಾಮಿಗೆ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಿರ್ಬಂಧಿಸಿದ ವಿಚಿತ್ರ ಘಟನೆ ನಡೆದಿದೆ.

ಖಾಸಗಿ ಕಂಪನಿಗಳ ತಂಡದೊಂದಿಗೆ ಊರಿಗೆ ಬಂದಿದ್ದ ಸಂಸದ ನಾರಾಯಣಸ್ವಾಮಿ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೂ ಭೇಟಿ ಕೊಟ್ಟಿದ್ದರು. ಈ ವೇಳೆ ಎದುರಾದ ಗೊಲ್ಲರಟ್ಟಿ ನಿವಾಸಿಗಳು ಹಟ್ಟಿಯ ಪ್ರವೇಶ ದ್ವಾರದಲ್ಲೇ ತಡೆದು ನಿಲ್ಲಿಸಿ, ಅಲ್ಲಿಯೇ ಕುರ್ಚಿ ಹಾಕಿ ಕೂರಲು ಮನವಿ ಮಾಡಿಕೊಂಡಿದ್ದಾರೆ. 

ಯಾವುದೇ ಕಾರಣಕ್ಕೂ ನಿಮ್ಮ ಜನಾಂಗದವರು ಹಟ್ಟಿ ಒಳಗಡೆ ಹೋಗಬಾರದು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ತಂಡದಲ್ಲಿದ್ದ ಇನ್ನಿತರರನ್ನು ಹಟ್ಟಿ ಒಳಕ್ಕೆ ಬಿಟ್ಟುಕೊಂಡಿದ್ದಾರೆ. ಸಂಸದ ನಾರಾಯಣಸ್ವಾಮಿ ಎಷ್ಟೇ ಮನವೊಲಿಸಿದರೂ ಗೊಲ್ಲರಹಟ್ಟಿ ನಿವಾಸಿಗಳು ಒಳಕ್ಕೆ ಬಿಟ್ಟುಕೊಳ್ಳಲೇ ಇಲ್ಲ. ನೀವು ಗೊಲ್ಲರಹಟ್ಟಿ ಪ್ರವೇಶ ಮಾಡಿದರೆ ಕೇವಲ ನಮಗೆ ಮಾತ್ರ ಅಲ್ಲ, ನಿಮಗೂ ಕೆಟ್ಟದಾಗುತ್ತದೆ. ಬಲವಂತಾಗಿ ನುಗ್ಗಿದ, ಸುಳ್ಳು ಹೇಳಿ ಒಳಗೆ ಬಂದಿದ್ದ ಹಲವರಿಗೆ ಅನಾಹುತ ಉಂಟಾಗಿದೆ. ಆ ಅನಾಹುತ ನಿಮಗೆ ಆಗೋದು ಬೇಡ ಎಂದು ನಾರಾಯಣಸ್ವಾಮಿಗೆ ಸಮಾಧಾನಪಡಿಸಿದ್ದಾರೆ.

ನಾನು ನಿಮ್ಮನ್ನು ಸುಧಾರಿಸಲು ಬಂದಿದ್ದೇನೆ,  ನೀವು ನಿಮ್ಮ ಹಳೇಯ ಮೌಢ್ಯಕ್ಕೆಅಂಟಿಕೊಂಡು ಕೂತಿದ್ದರೇ ನಾನು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಷ್ಟೆಲ್ಲಾ ಅವಮಾನಗಳನ್ನ ಸಹಿಸಿಕೊಂಡು ಸಂಸದ ನಾರಾಯಣಸ್ವಾಮಿ ಸೌಜನ್ಯದಿಂಲೇ ಕಾರಿನಲ್ಲೇ ಕುಳಿತುಕೊಂಡರು.

ನಾನು ಅತಿಹೆಚ್ಚು ಗೊಲ್ಲರ ಮತದಿಂದ ಗೆದ್ದು ಬಂದಿದ್ದೆನೆ. ಅವರ ಸಮುದಾಯಕ್ಕೆ ಏನಾದರೊಂದು ಒಳ್ಳೆಯದು ಮಾಡಬೇಕು ಎಂದು ಬಂದಿದ್ದೇನೆ. ಈ ಒಂದು ಕಾರಣಕ್ಕೆ ನೀವು ಅವಮಾನ ಮಾಡಿದರೂ ಸುಮ್ಮನಿದ್ದೇನೆ ಎಂದು ಸೌಜನ್ಯದಿಂದ ವರ್ತಿಸಿದರು.  ನಾನು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ, ಜಾತಿ ನಿಂದನೆಯಂತ ಕೇಸು ದಾಖಲಿಸುವುದಿಲ್ಲ, ಅವರೆಲ್ಲಾ ನನಗೆ ಮತ ಹಾಕಿದ್ದಾರೆ ಎಂದು ಸುಮ್ಮನಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com