ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ತನಿಖೆಗೊಳಪಡಿಸಿದ್ದಾರೆ.
ಪ್ರಕರಣದ ಕಿಂಗ್ ಪಿಂಗ್ ಮನ್ಸೂರ್ ಖಾನ್ ನಿಂದ ಹಣ ಪಡೆದ ಆರೋಪದಡಿ ಭಾನುವಾರ ಹೇಮಂತ್ ನಿಂಬಾಳ್ಕರ್ ಅವರನ್ನು ಸಿಬಿಐ ಅಧಿಕಾರಿಗಳು ಸತತ ಮೂರುಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿ ಸಿಐಡಿ ಆರ್ಥಿಕ ಅಪರಾಧ ವಿಭಾಹದ ಐಜಿಪಿಯಾಗಿದ್ದಾಗ ಮನ್ಸೂರ್ ಖಾನ್ನಿಂದ ಹಣ ಪಡೆದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಮತ್ತೆ ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಹೇಮಂತ್ ನಿಂಬಾಳ್ಕರ್ ಗೆ ಸಿಬಿಐ ಅಧಿಕಾರಿಗಳು ಸೂಚಿಸಿದ್ದಾರೆ.
ಇನ್ನೋರ್ವ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಅವರ ಮೇಲೂ ಹಣಪಡೆದಿರುವ ಆರೋಪ ಇದ್ದು, ಇವರನ್ನು ಸಹ ಸಿಬಿಐ ವಿಚಾರಣೆಯನ್ನು ನಡೆಸುವ ಸಾಧ್ಯತೆ ಇದೆ.
ಈಗಾಗಲೇ ಮೂವರು ಐಎಎಸ್ ಅಧಿಕಾರಿಗಳಾದ ವಿಜಯ್ ಶಂಕರ್, ನಾಗರಾಜು ಹಾಗೂ ರಾಜ್ ಕುಮಾರ್ ಖತ್ರಿ ವಿಚಾರಣೆ ನಡೆಸಿರುವ ಸಿಬಿಐ ಐಪಿಎಸ್ ಅಧಿಕಾರಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
Advertisement