ಎಸ್.ಮಾಲತಿ ಅವರು ರಾಜ್ಯದ ಚಂದನ ವಾಹಿನಿ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೂ ಭಾಜನರಾಗಿದ್ದರು.
ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಪದವೀಧರೆಯಾಗಿದ್ದ ಮಾಲತಿ ನಾಟಕ ರಚನೆ, ಪುಸ್ತಕ ವಿಮರ್ಶೆ, ನಾಟಕ ನಿರ್ದೇಶನ ಹೀಗೆ ಸದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. 'ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ಅಂತರಂಗ ಅಂಕಣದ ಮೂಲಕ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದರು.
ಕೆರೆಗೆ ಹಾರ, ಸಿರಿ ಸಂಪಿಗೆ, ಯಯಾತಿ, ಹಯವದನ, ಹ್ಯಾಮ್ಲೆಟ್ ಮುಂತಾದ ನಾಟಕಗಳನ್ನು ನಿರ್ದೇಶಿಸಿ, ಪ್ರದರ್ಶಿಸಿದ್ದಾರೆ. ಜೀವನವೆಂಬ ನಾಟಕ ರಂಗ, ದಲಿತ ಲೋಕ, ಭೀಮಕಥಾನಕ ಮುಂತಾದ ಸ್ವರಚಿತ ನಾಟಕಗಳಲ್ಲದೆ, ರೋಶೋಮನ್, ಜನತೆಯ ಶತ್ರು, ಒಂದು ಪಯಣದ ಕಥೆ ಮುಂತಾದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.
ಭಾವಕೋಶ, ತಾನು ಒಲಿದಂತೆ ಹಾಡುವೆ ಸಂಕಲನಗಳನ್ನು ಪ್ರಕಟಿಸಿದ್ದರು. ಕ್ಷಣಿಕವಲ್ಲದ ಕ್ಷಣಗಳು ಕವನ ಸಂಕಲನಕ್ಕೆ ಮುಂಬಯಿ ಕನ್ನಡ ಸಂಘದ ಪೇಜಾವರ ಸದಾಶಿವ ರಾವ್ ಪ್ರಶಸ್ತಿ ಲಭಿಸಿತ್ತು.
ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದ ಅವರು ನಾಟಕ ಅಕಾಡೆಮಿಯ ನಿರ್ದೇಶಕಿ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಕ್ಕಳ ರಂಗಭೂಮಿ ಪ್ರಶಸ್ತಿಗೂ ಭಾಜನರಾಗಿದ್ದರು. ಪತಿ ಪುರುಷೋತ್ತಮ ತಲವಾಟ ಸಹ ರಂಗಭೂಮಿ, ಚಲನಚಿತ್ರ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ.