ಬೆಂಗಳೂರು: ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಇಸ್ರೋದ ಮಹತ್ವದ ಚಂದ್ರಯಾನ ಯೋಜನೆಯಲ್ಲಿ ಭಾಗವಹಿಸಿ ಖ್ಯಾತರಾಗಿದ್ದ ಬಾಹ್ಯಾಕಾಶ ವಿಜ್ಞಾನಿ ಡಾ.ಎಸ್.ಕೆ.ಶಿವಕುಮಾರ್(65) ಶನಿವಾರ ನಿಧನರಾದರು.
ಕಳೆದ ಹತ್ತು ದಿನಗಳಿಂದ ಅನಾರೋಗ್ಯಕ್ಕೀಡಾಗಿ ಬೆಂಗಳುರಿನ ಕಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷರಾಗಿದ್ದ ಶಿವಕುಮಾರ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ಮೈಸೂರು ಮೂಲದ ಶಿವಕುಮಾರ್ ಚಂದ್ರಯಾನ ಯೋಜನೆಯಲ್ಲಿ ಚಂದ್ರಯಾನ-1ಗೆ ಟೆಲಿಮೆಟ್ರಿ ಸಿಸ್ಟಮ್ ಅಭಿವೃದ್ದಿಪಡಿಸಿದ ತಂಡದ ಸದಸ್ಯರಾಗಿದ್ದರು. ಪತ್ರಿಕೋದ್ಯಮ ಶಿಕ್ಷಣ ಪಡೆದಿದ್ದ ಇವರು ಮೈಸೂರು ವಿವಿನಲ್ಲಿ ಪದವಿ ವ್ಯಾಸಂಗದ ನಂತರ ಬೆಂಗಳೂರಿನ ಐಐಎಸ್ಸಿ ನಲ್ಲಿ 'ಫಿಸಿಕಲ್ ಎಂಜಿನಿಯರಿಂಗ್'ನಲ್ಲಿ 'ಎಂ.ಟೆಕ್ ಶಿಕ್ಷಣ' ಪಡೆದು ೧೯೭೬ರಲಿ ಇಸ್ರೋಗೆ ಸೇರಿದ್ದರು.
ಇಸ್ರೋ ಬ್ಯಾಲಾಳು ಉಪಗ್ರಹ ಕೇಂದ್ರ ಸ್ಥಾಪನೆಯ ಹಿಂದೆ ಇವರ ಅಪಾರ ಪರಿಶ್ರಮವಿದೆ. ಇಸ್ರೋದ ಹಲವು ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದ ಶಿವಕುಮಾರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ವಿವಿ ಗೌರವ ಡಾಕ್ಟರೇಟ್ ಅಲ್ಲದೆ 2010ರಲ್ಲಿ ಪ್ರತಿಷ್ಠಿತ ಪದ್ಮಶ್ರೀ, ಪ್ರಶಸ್ತಿ ಒಲಿದು ಬಂದಿತ್ತು.
ಇಂದು ಸಂಜೆ ಬನಶಂಕರಿಯ ಚಿತಾಗಾರದಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ಹೇಳಿದೆ.