ಬೆಂಗಳೂರು: ಕರ್ನಾಟಕ ಪ್ರಿಮಿಯರ್ ಲೀಗ್ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟಿಯರು ಭಾಗಿಯಾಗಿದ್ದು, ಅವರನ್ನು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ನಟಿ ಮಣಿಯರ ವಿಚಾರಣೆ ಗೌಪ್ಯ ಸ್ಥಳದಲ್ಲಿ ನಡೆಸಲಿದೆ ಎಂಬ ಮಾತು ಕೇಳಿದ ಬಂದ ಹಿನ್ನೆಲೆಯಲ್ಲಿ ಈ ವಿಚಾರದ ಕುರಿತು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ನೋಟಿಸ್ ನೀಡಿದ ನಟಿಯರು, ನಮ್ಮ ಅಧಿಕೃತ ಕಚೇರಿಯಲ್ಲೇ ಬಂದು ವಿಚಾರಣೆ ಎದುರಿಸಬೇಕು. ಬೇರೆ ಹೊಟೇಲ್, ಗೌಪ್ಯ ಸ್ಥಳದಲ್ಲಿ ಅವರನ್ನು ವಿಚಾರಣೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತನಿಖೆ ಅಧಿಕೃತವಾಗಿ ಸಿಸಿಬಿ ಕಚೇರಿಯಲ್ಲೇ ನಡೆಯುತ್ತದೆ. ಇದರಲ್ಲಿ ಯಾರಿಗೂ ಯಾವುದೇ ರಿಯಾಯಿತಿ ಇಲ್ಲ, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದರು.
ಪ್ರಸ್ತುತ ಸೈಬರ್ ಕ್ರೈಂ ನಲ್ಲಿ 10 ಸಾವಿರ ಪ್ರಕರಣ ದಾಖಲಾಗಿದ್ದು, ಮೊಬೈಲ್ ಗಳಿಂದಲೇ ಮುಖ್ಯವಾಗಿ ಅಪರಾಧ ನಡೆಯುತ್ತಿವೆ. ಮಾಲ್, ಅಂಗಡಿ ಮತ್ತು ಇನ್ನಿತರ ವ್ಯವಹಾರ ಸ್ಥಳದಲ್ಲಿ ಮೊಬೈಲ್ ನಂಬರ್ ಅನ್ನು ಸಾರ್ವಜನಿಕರು ನೀಡಬಾರದು. ಮೊಬೈಲ್ ನಂಬರ್ ನೀಡಿಯೇ ವ್ಯಾಪಾರ ಮಾಡಬೇಕು ಎಂದೇನಿಲ್ಲ. ತಾಂತ್ರಿಕ ಪ್ರಪಂಚಕ್ಕೆ ಮೊಬೈಲ್ ಮುಖ್ಯ. ಮೊಬೈಲ್ ನಂಬರ್ ನೀಡಿದರೆ ಅದರಲ್ಲಿರುವ ಡಾಟಾಗಳನ್ನು ಕದಿಯಲು ಸಹಕಾರಿಯಾಗುತ್ತದೆ. ಹೀಗಾಗಿ ಮೊಬೈಲ್ ನಂಬರ್ ಅಂಗಡಿಗಳಲ್ಲಿ ಕೊಡುವುದು ಕಡ್ಡಾಯವಲ್ಲ. ಮೊಬೈಲ್ ನಂಬರ್ ಕೊಡಲೇಬೇಕು ಎಂದಾದರೇ ಅಂತಹವರ ಬಳಿ ವ್ಯಾಪಾರವನ್ನೇ ಮಾಡಬೇಡಿ ಎಂದು ಸಾರ್ವಜನಿಕ ರಿಗೆ ಕಿವಿ ಮಾತು ಹೇಳಿದರು.
Advertisement