ಸಾಲ ಮನ್ನಾಕ್ಕಾಗಿ ಋಣಸಂದಾಯ: ಕುಮಾರಣ್ಣನಿಗೆ ಪಾರ್ಸೆಲ್ ನಲ್ಲಿ ಬಂತು ರೈತನ ಉಡುಗೊರೆ

ರಾಜ್ಯದ ರೈತರ ಸುಮಾರು 46 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಿದ್ದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಉತ್ತರ ಕರ್ನಾಟಕದ ನೇಗಿಲಯೋಗಿಯೊಬ್ಬರು ವಿಶೇಷ ಉಡುಗೊರೆ ನೀಡಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯದ ರೈತರ ಸುಮಾರು 46 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಿದ್ದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಉತ್ತರ ಕರ್ನಾಟಕದ ನೇಗಿಲಯೋಗಿಯೊಬ್ಬರು ವಿಶೇಷ ಉಡುಗೊರೆ ನೀಡಿದ್ದಾರೆ.

ಧಾರವಾಡ ಜಿಲ್ಲೆ ಹುಬ್ಬಳಿ ತಾಲೂಕಿನ ಕಿರೇಸೂರ ಗ್ರಾಮದ ಗೋವಿಂದಪ್ಪ ಶ್ರೀ ಹರಿ ಎಂಬ ರೈತ ಸಾಲಬಾಧೆಯಿಂದ ನರಳುತ್ತಿದ್ದು, ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರಿಗೆ ಸಾಲ ಹೆಚ್ಚಳದಿಂದ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನ ಮಾಡಿರುವುದಾಗಿ ಪತ್ರ ಬರೆದಿದ್ದರು. 

ಆ ರೈತ ಬರೆದಿದ್ದ ಪತ್ರದಲ್ಲಿದ್ದ ದೂರವಾಣಿ ಸಂಖ್ಯೆಗೆ ತಕ್ಷಣವೇ ಫೋನಾಯಿಸಿದ್ದ ಅಂದಿನ ಸಿಎಂ ಎಚ್ ಡಿ ಕೆ, ಸಾಲ ಮನ್ನಾ ಆಗುತ್ತೆ, ಆತ್ಮಹತ್ಯೆಯಂತಹ ನಿರ್ಧಾರ ಮಾಡಬಾರದೆಂದು ಭರವಸೆ ನೀಡಿದ್ದರು. ರೈತ ಗೋವಿಂದಪ್ಪ ಶ್ರೀ ಹರಿಯವರಿಗೆ ಫೋನ್ ಮೂಲಕವೇ ಕುಮಾರಸ್ವಾಮಿ ಸಾಂತ್ವನ ಹೇಳಿದ್ದು, ನಂತರ ಆ ರೈತರ ಸಾಲ ಮನ್ನಾ ಕೂಡ ಆಯಿತು. 

ಆ ರೈತ ತನ್ನ ಹೊಲದಲ್ಲಿ ಜೋಳಾ, ಶೇಂಗಾ ಬೆಳೆದು ಬದುಕು ಕಟ್ಟಿಕೊಂಡರು. ಅಷ್ಟರಲ್ಲಿ ರಾಜಕೀಯ ಸ್ಥಿತ್ಯಂತರಗಳ ನಡುವೆ ಅಧಿಕಾರ ಎಚ್ ಡಿ ಕೆ ಕಳೆದುಕೊಂಡರು. ಆದರೆ ಕುಮಾರಸ್ವಾಮಿಯವರು ಹೇಳಿದ ಸಾಂತ್ವನ ಮತ್ತು ಸಾಲ ಮನ್ನಾ ಮಾಡಿದ್ದನ್ನು ಸ್ಮರಿಸಿರುವ ಅವರು ತಮ್ಮ‌ ಹೊಲದಲ್ಲಿ ಬೆಳೆದ ಬೆಳೆಯಲ್ಲಿ ಜೋಳದ ರೊಟ್ಟಿ , ಶೇಂಗಾ ಚಟ್ನಿ ಪುಡಿ, ಡ್ರೈ ಪಲ್ಯಾ ತಯಾರು ಮಾಡಿ ದೊಡ್ಡ ಬಾಕ್ಸ್ ನಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಯವರ ಜೆಪಿ ನಗರ ನಿವಾಸಕ್ಕೆ ಕೊರಿಯರ್ ಮಾಡಿ ವಿಶೇಷ ಕೃತಜ್ಞತೆಯನ್ನು ಪತ್ರದ ಮೂಲಕ ತಿಳಿಸಿದ್ದಾರೆ.

ಉಡುಗೊರೆ ಬಾಕ್ಸ್ ಅನ್ನು ಪರಿಶೀಲಿಸಿದ ಭದ್ರತಾ ಸಿಬ್ಬಂದಿ ಜೋಳದರೊಟ್ಟಿ, ಶೇಂಗಾ ಚಟ್ನಿಪುಡಿ, ಡ್ರೈ ಪಲ್ಯಾ ಮತ್ತು ರೈತ ಗೋವಿಂದಪ್ಪ ಶ್ರೀ ಹರಿಯವರ ಕೃತಜ್ಞತಾ ಪತ್ರ ಇರುವ ಬಗ್ಗೆ ಗಮನಕ್ಕೆ ತಂದಿದ್ದಾರೆ.

ವಿಶೇಷ ಉಡುಗೊರೆಗೆ ಧನ್ಯವಾದ ತಿಳಿಸಿರುವ ಎಚ್ ಡಿ ಕೆ, ರೈತ ಗೋವಿಂದಪ್ಪ ಶ್ರೀಹರಿಯವರಂತಹ ರೈತರೇ ತಮ್ಮ ರಾಜಕೀಯ ಜೀವನಕ್ಕೆ ಸ್ಪೂರ್ತಿ ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com