ಮಂಗಳೂರು: ಬಂದರು ನಗರಿ ಮಂಗಳೂರಿನಲ್ಲಿ ಶುಕ್ರವಾರ ದಿಂದ ಮೂರು ದಿನಗಳ ಕಾಲ ವಿಶ್ವ ಹಿಂದೂ ಪರಿಷತ್(ವಿಹೆಚ್ ಪಿ) ಸಭೆ ಆರಂಭಗೊಂಡಿದೆ. ಪೌರತ್ವ ತಿದ್ದುಪಡಿ ವಿಧೇಯಕ(ಸಿಎಎ) ಹಾಗೂ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಿದೆ.
ಬಲಪಂಥೀಯ ಹಿಂದೂ ಗುಂಪಿನ 'ಪ್ರಬಂಧ ಸಮಿತಿ' ಮತ್ತು ಅದರ 'ಪ್ರಣ್ಯಾಸಿ ಮಂಡಲ್ ಬೈಠಕ್' ಸಭೆಗಳು, ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಜನವರಿ 20 ರಂದು ನಡೆಯಲಿರುವ "ಮಾರ್ಗದರ್ಶಕ್ ಮಂಡಲ್ " ನಿರ್ಣಾಯಕ ಸಭೆಗೆ ಮುನ್ನ ನಡೆಯಲಿದೆ.
ದೇಶ ವಿಭಜನೆಯ ವೇಳೆ ಎಸಗಲಾದ ಐತಿಹಾಸಿಕ ಪ್ರಮಾದದಿಂದ ಕೋಟ್ಯಾಂತರ ಹಿಂದೂಗಳಿಗೆ ಆಗಿರುವ ಅನ್ಯಾಯ, ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮದಿಂದ ನಿವಾರಣೆಯಾಗಲಿದೆ ಎಂದು ವಿಶ್ವಹಿಂದೂಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೂಗಳ ಸಂಘಟನೆಯಾಗಿರುವ ವಿಶ್ವ ಹಿಂದೂ ಪರಿಷತ್ ನೆರೆಯ ಮೂರು ಮುಸ್ಲಿಂ ದೇಶಗಳಲ್ಲಿನ ಹಿಂದೂಗಳು ಭಾರತೀಯ ಪೌರತ್ವ ಸ್ವೀಕರಿಸುವಂತೆ ಮಾಡಲು ತನ್ನ ಎಲ್ಲ ಪ್ರಯತ್ನ ನಡೆಸಲಿದೆ. ಸಿಎಎ ಕಾಯ್ದೆ ಸಂಬಂಧ ದೇಶಾದ್ಯಂತ ತಪ್ಪು ಹಾಗೂ ಸುಳ್ಳು ಮಾಹಿತಿಯನ್ನು ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿದೆ.
ಸಿಎಎ ಕಾಯ್ದೆಯ ಸಕಾರಾತ್ಮಕ ಅಂಶಗಳನ್ನು ಜನರಿಗೆ ತಿಳಿಸಲು ವಿಹೆಚ್ ಪಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಿದೆ. ಮೂರು ಇಸ್ಲಾಂ ದೇಶಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ ದೇಶದಲ್ಲಿ ಧಾರ್ಮಿಕ ಕಿರುಕುಳಗಳಿಗೆ ಒಳಗಾಗುವ ಅಲ್ಪಸಂಖ್ಯಾತರನ್ನು ನಿಭಾಯಿಸುವ ಸಿಎಎ ಕಾಯ್ದೆ ಭಾರತದಲ್ಲಿರುವ ಅಲ್ಪಸಂಖ್ಯಾತರನ್ನು ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದಿದೆ.
ಇಸ್ಲಾಮಿಕ್ ದೇಶಗಳಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ. ಅವರ ವಿರುದ್ದ ತಾರತಮ್ಯ ನಡೆಯುತ್ತಿಲ್ಲ. ಈ ಕಾಯ್ದೆಗೂ ಭಾರತೀಯ ಮುಸ್ಲಿಮರಿಗೂ ಸಂಬಂಧವಿಲ್ಲ. ನೆರೆಯ ಮೂರು ನಿರ್ಧಿಷ್ಟ ಮುಸ್ಲಿಂ ದೇಶಗಳಿಂದ ಧಾರ್ಮಿಕ ಕಿರುಕುಳಗಳಿಗೆ ಒಳಗಾಗಿ ಭಾರತಕ್ಕೆ ಬರುವ ನಿರಾಶ್ರಿತ ಅಲ್ಪಸಂಖ್ಯಾತರರಾದ ಹಿಂದೂ, ಜೈನ್, ಬೌದ್ಧ,ಸಿಖ್, ಹಾಗೂ ಕ್ರಿಶ್ಚಿಯನ್ ಸಮುದಾಯಗಳಿಗೆ ಇದು ಸಂಬಂಧಿಸಿದ್ದಾಗಿದೆ ಎಂದು ವಿಹೆಚ್ ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಟ್ರಸ್ಟ್ ರಚನೆ ಸಂಬಂಧ ಸಹ ವಿಶ್ವ ಹಿಂದೂ ಪರಿಷತ್ ಚರ್ಚೆ ನಡೆಸಲಿದೆ
ಉದ್ದೇಶಿತ ಟ್ರಸ್ಟ್ ಸ್ವತಂತ್ರ ವ್ಯವಸ್ಥೆಯಾಗಬೇಕು, ದೇಗುಲವನ್ನು ಸರ್ಕಾರ ನಿರ್ಮಿಸಬಾರದು, ಸಮಾಜದ ಹಣದಿಂದ ನಿರ್ಮಿಸಬೇಕು ಹೇಳಿದೆ.
ರಾಮಜನ್ಮಭೂಮಿ ಆಂದೋಲನದ ವೇಳೆ ಜನಪ್ರಿಯವಾಗಿದ್ದ ದೇಗುಲ ಮಾದರಿಯಲ್ಲಿ ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಲಾಗುವುದು. ಆಯೋಧ್ಯೆಯಲ್ಲಿ ಲಭ್ಯವಿರುವ ಕೆತ್ತನೆ ಮಾಡಿರುವ ಕಲ್ಲುಗಳನ್ನೇ ಬಳಸಲಾಗುವುದು.
ಹಿಂದೂ ಸಂಸ್ಕಾರದ ಅಭಾವದ ಕಾರಣ ದೇಶಾದ್ಯಂತ ಹಲವು ಮಹಿಳೆಯರು ಅಪಮಾನಕ್ಕೀಡಾಗುತ್ತಿದ್ದು, ವಿಶ್ವ ಹಿಂದೂ ಪರಿಷತ್ ಸಮಾವೇಶದಲ್ಲಿ ಮಹಿಳಾ ಭದ್ರತಾ ವಿಷಯಗಳನ್ನು ಚರ್ಚಿಸಲಿದೆ.
Advertisement