ಜೀವರಕ್ಷಕ ವ್ಯವಸ್ಥೆಯೊಂದಿಗೆ ಪೇಜಾವರ ಶ್ರೀ ಕೃಷ್ಣಮಠಕ್ಕೆ ಸ್ಥಳಾಂತರ

ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ನಾಳೆ ಉಡುಪಿ ಕೃಷ್ಣ ಮಠಕ್ಕೆ ಸಕಲ ಜೀವರಕ್ಷಕ ವ್ಯವಸ್ಥೆಯೊಂದಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಪೇಜಾವರ ಶ್ರೀಗಳು (ಸಂಗ್ರಹ ಚಿತ್ರ)
ಪೇಜಾವರ ಶ್ರೀಗಳು (ಸಂಗ್ರಹ ಚಿತ್ರ)

ಉಡುಪಿ: ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ನಾಳೆ ಉಡುಪಿ ಕೃಷ್ಣ ಮಠಕ್ಕೆ ಸಕಲ ಜೀವರಕ್ಷಕ ವ್ಯವಸ್ಥೆಯೊಂದಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಮಾಧ್ಯಮಗಳು ವರದಿ ಮಾಡಿದ್ದು, 'ಪೇಜಾವರ ಶ್ರೀಗಳ ಆರೋಗ್ಯ ಚೇತರಿಕೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲವಾದ್ದರಿಂದ ಶ್ರೀಗಳ ಅಂತಿಮ ಆಸೆಯಂತೆ ಭಾನುವಾರ ಅವರನ್ನು ಮಠಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ಶನಿವಾರ ಸಂಜೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕಿರಿಯ ಶ್ರೀಗಳು ‘ಶ್ರೀಗಳು ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಹಾಗಾಗಿ, ಆಸ್ಪತ್ರೆಯಲ್ಲಿಟ್ಟುಕೊಳ್ಳುವ ಬದಲು ಮಠಕ್ಕೆ ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶ್ರೀಗಳು ಬದುಕಿರುವಷ್ಟು ದಿನಗಳು ಕೃಷ್ಣಮಠದ ಆವರಣದಲ್ಲಿ ಇರಲಿ ಎಂಬುದು ಎಲ್ಲರ ಅಪೇಕ್ಷೆ. ಅಗತ್ಯ ಜೀವರಕ್ಷಕಗಳ ವ್ಯವಸ್ಥೆಯೊಂದಿಗೆ ಗುರುಗಳನ್ನು ಮಠಕ್ಕೆ ಸಾಗಿಸಲಾಗುವುದು. ಅಲ್ಲಿಯೇ ತಜ್ಞ ವೈದ್ಯರು ಚಿಕಿತ್ಸೆ ಮುಂದುವರಿಸಲಿದ್ದಾರೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯುವುದಿಲ್ಲ. ಈಗಾಗಲೇ ದೆಹಲಿಯ ಏಮ್ಸ್‌ ಹಾಗೂ ಕೆಎಂಸಿ ತಜ್ಞ ವೈದ್ಯರು ಶಕ್ತಿಮೀರಿ ಪ್ರಯತ್ನಿಸಿದ್ದಾರೆ ಎಂದು ಕಿರಿಯ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com