ಮೈಸೂರು: ಬಂಡೀಪುರ ಹುಲಿ ರಕ್ಷಿತಾರಣ್ಯದ ಒಳಗೆ ಜಂಗಲ್ ಲಾಜ್ಜ್ ಅಂಡ್ ರೆಸಾರ್ಟ್ ಹತ್ತಿರ 6 ವರ್ಷದ ಹೆಣ್ಣು ಹುಲಿಯೊಂದು ಅಸುನೀಗಿರುವುದುಪತ್ತೆಯಾಯಿತು. ವೇಗವಾಗಿ ಬಂದ ವಾಹನದ ಅಡಿಗೆ ಸಿಲುಕಿ ಹುಲಿ ಸತ್ತಿರಬಹುದು ಎಂದು ಶಂಕಿಸಲಾಗಿದೆ.
ಬಂಡೀಪುರ ಅಭಯಾರಣ್ಯದ ಪ್ರವೇಶ ದ್ವಾರದಿಂದ ಸ್ವಲ್ಪ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 766ರಡಿ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸಮೀಪ ಮಗುವನಹಳ್ಳಿ ಗ್ರಾಮದ ಗಡಿಭಾಗದಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದೆ. ಕಳೆದ ಆರು ತಿಂಗಳಲ್ಲಿ ಒಟ್ಟು ನಾಲ್ಕು ಹುಲಿಗಳು ಬಂಡೀಪುರ ಅರಣ್ಯದಲ್ಲಿ ಮೃತಪಟ್ಟಿವೆ.
ಹುಲಿ ಸತ್ತು ಬಿದ್ದ ಸ್ವಲ್ಪ ದೂರದಲ್ಲಿ ಕಾಡು ಹಂದಿಯ ಅರ್ಧ ತಿಂದ ಮೃತದೇಹ ಸಿಕ್ಕಿದ್ದರಿಂದ ಕಾಡು ಹಂದಿ ಜೊತೆಗಿನ ಜಗಳದಲ್ಲಿ ಗಾಯಗೊಂಡು ಹುಲಿ ಸತ್ತಿರಬೇಕೆಂದು ಆರಂಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭಾವಿಸಿದ್ದರು.
ನಂತರ ಶವಪರೀಕ್ಷೆ ಮಾಡಿದ ನಂತರ ಹುಲಿಯ ಮೈ ಮೇಲೆ ಹಲವು ಗಾಯಗಳು ಕಂಡುಬಂದಿದ್ದು ಅವುಗಳಲ್ಲಿ ವಾಹನದ ಅಡಿಗೆ ಸಿಲುಕಿ ಆದ ಗಾಯ ಕೂಡ ಇದ್ದಿತು.