ಬೆಳಗಾವಿ: ಗೃಹರಕ್ಷಕರ ನೇಮಕಾತಿಗೆ ನಗರದಲ್ಲಿ ಇಂದು ನಡೆದ ದೈಹಿಕ ಪರೀಕ್ಷೆ ವೇಳೆ 26 ವರ್ಷದ ಯುವಕನೊಬ್ಬ ಓಡುವಾಗ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಮಂಗಳವಾರ ಕೆಎಸ್ಆರ್ ಪಿ ಮೈದಾನದಲ್ಲಿ ನಡೆದ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ನತದೃಷ್ಟ ಪ್ರಸಾದ್ ಎ ತಲುಕಾರ್ ಎರಡು ಸುತ್ತಿನ ದೈಹಿಕ ಪರೀಕ್ಷೆಯನ್ನೂ ಮುಗಿಸಿದ್ದ. ಮೂರನೇ ಸುತ್ತಿನ ದೈಹಿಕ ಪರೀಕ್ಷೆ ಭಾಗವಾಗಿ ಓಡುವಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕಾರಿಗಳು ತಕ್ಷಣವೇ ಯುವಕನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರಾದರೂ, ಮಾರ್ಗದ ಮಧ್ಯೆಯೇ ಆತ ಮೃತಪಟ್ಟಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು.