ಬೆಂಗಳೂರು: ರಾಜ್ಯದಲ್ಲಿರುವ ಪ್ರತಿಯೊಬ್ಬರೂ ಕನ್ನಡ ಭಾಷೆ ಕಲಿಯಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಅವರು ನಿನ್ನೆ ಕಂಠೀರವ ಕ್ರೀಡಾಂಗಣದಲ್ಲಿ 64ನೇ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಭಾಷಣ ಮಾಡಿ, ಇಂಗ್ಲಿಷ್ ಭಾಷೆಯ ಮೇಲೆ ವ್ಯಾಮೋಹ ಬೇಡ. ಕನ್ನಡ ಭಾಷೆ ಬೆಳೆಯಲು ಅದರದ್ದೇ ಆದ ಸಾಮರ್ಥ್ಯವನ್ನು ಹೊಂದಿದೆ. ಕನ್ನಡಿಗರ ವಿಷಯ ಬಂದಾಗ ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಆದ್ಯತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕನ್ನಡ ಭಾಷೆಗೆ ಸುಮಾರು 2 ಸಾವಿರ ವರ್ಷಗಳ ದೀರ್ಘ ಪರಂಪರೆಯಿದ್ದು, ನಾವು 8 ಜ್ಞಾನಪೀಠ ಪ್ರಶಸ್ತಿ ಗೆದ್ದಿದ್ದೇವೆ ಎಂದರು.
ಕರ್ನಾಟಕದ ಏಕೀಕರಣಕ್ಕೆ ಹಲವರು ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆ ಉಳಿದು ಬೆಳೆಯಲು ಅದು ನಮ್ಮ ದಿನನಿತ್ಯ ಜೀವನದ ಭಾಗವಾಗಬೇಕು ಎಂದು ಯಡಿಯೂರಪ್ಪ ಹೇಳಿದರು.
ಈ ಮಧ್ಯೆ ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸರ್ಕಾರಿ ಶಾಲಾ ಮಕ್ಕಳಿಗೆ ಎರಡನೇ ಬಾರಿ ಸಮವಸ್ತ್ರಗಳನ್ನು ನೀಡಲು ಸಂಪುಟ ನಿರ್ಧರಿಸಿದೆ. ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಅರ್ಥಕೋಶವನ್ನು ಡಿಜಿಟಲೀಕರಣಗೊಳಿಸಿದ್ದು ಸರ್ಕಾರ ಇ-ಆಡಳಿತವನ್ನು ಜಾರಿಗೆ ತಂದಿದೆ. ಇದರಿಂದ ಕೋಟ್ಯಂತರ ಜನರಿಗೆ ಅನುಕೂಲವಾಗುತ್ತದೆ ಎಂದರು.
ನಿನ್ನೆ ಕಂಠೀರವ ಕ್ರೀಡಾಂಗಣದಲ್ಲಿ ಸುಮಾರು 7 ಸಾವಿರ ಮಕ್ಕಳು ನೃತ್ಯ, ಯೋಗ, ಡ್ರಿಲ್, ಯಕ್ಷಗಾನ, ಭರತನಾಟ್ಯ ಮತ್ತು ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳನ್ನು ನೀಡಿದರು. ದಕ್ಷಿಣ ಬೆಂಗಳೂರಿನಿಂದ 510 ಮಕ್ಕಳನ್ನು ಸೇರಿಸಿ ನಾವು 20 ದಿನ ಅಭ್ಯಾಸ ನಡೆಸಿದೆವು. ಮಹೇಶ್ವರಿ ದೇವಿಯ ಗುರುತಾಗಿಟ್ಟುಕೊಂಡು ಹಣತೆ ಬೆಳಗಿಸಿ ಮಕ್ಕಳಿಂದ ವಿವಿಧ ಕಾರ್ಯಕ್ರಮ ನಡೆಸಿಕೊಟ್ಟೆವು ಎಂದು ನೃತ್ಯ ನಿರ್ದೇಶಕ ಮಹೇಶ್ ಕುಮಾರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದರು.
Advertisement