ರಾಯಭಾಗ: ಐದು ಗ್ರಾಮಗಳ ಜನರು ನಿತ್ಯ ಓಡಾಡಲು ಬಳಸಿದ್ದ ಗ್ರಾಮೀಣ ಮುಖ್ಯ ರಸ್ತೆಯೊಂದು ದಿಡೀರನೇ ಐದು ಅಡಿಯಷ್ಟು ಕುಸಿದಿದ್ದು ವಾಹನ ಸವಾರರು ನಿತ್ಯವೂ ಪರದಾಡುವಂತಾಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿಯ ರಾಯಬಾಗ ತಾಲೂಕಿನ ಜಲಾಲಪೂರ ಗ್ರಾಮದಲ್ಲಿ ಐದು ಅಡಿ ಆಳಕ್ಕೆ ಕುಸಿದ ರಸ್ತೆ ಗ್ರಾಮಸ್ಥರಿಗೆ ಸಂಕಟ ತಂದಿದೆ. ದಿನನಿತ್ಯ ಈ ರಸ್ತೆಯ ಮೂಲಕವೇ ನೂರಾರು ವಾಹನಗಳು ಸಂಚಾರ ನಡೆಸುತ್ತವೆ. ಆದರೆ ದಿಡೀರ್ ಐದು ಅಡಿ ಆಳಕ್ಕೆ ರಸ್ತೆ ಕುಸಿದಿದ್ದರಿಂದ ನಾಲ್ಕು ಚಕ್ರದ ವಾಹನಗಳು ಸಂಪೂರ್ಣ ಬಂದ್ ಆಗಿದೆ. ಇದರಿಂದ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವ ಪ್ರಯೋಜನ ಆಗಿಲ್ಲ. ಈಗ ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಹೋರಾಟಕ್ಕೆ ಮುಂದಾಗುವ ನಿರ್ಧಾರ ಕೈಗೊಂಡಿದ್ದಾರೆ.
ಸುತ್ತಲೂ ನಾಲ್ಕರಿಂದ ಐದು ಗ್ರಾಮಗಳ ಜನ ನಿತ್ಯಸಂಚಾರಕ್ಕೆ ಇದೇ ಮಾರ್ಗವನ್ನು ಅವಲಂಬಿಸಿದ್ದರು. ಇದೀಗ ಜಲಾಲಪೂರ-ಹಳೇ ದಿಗ್ಗೇವಾಡಿ ಮಾರ್ಗ ಕುಸಿತವಾಗಿದ್ದು ದೊಡ್ಡವಾಹನಗಳು ಸಂಚರಿಸುವುದು ಬಂದ್ಆಗಿದೆ. ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಜೀವ ಕೈಯಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ರಾತ್ರಿ ವೇಳೆ ಈ ಮಾರ್ಗವಾಗಿ ಸಂಚರಿಸಿ ಕಾಣದೆ ಬಿದ್ದು ನಾಲ್ಕೈದು ಜನ ಗಾಯಗೊಂಡಿರುವ ಘಟನೆ ಸಹ ವರದಿಯಾಗಿದೆ.
ಮುಂಬರುವ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭಗೊಳ್ಳಲಿದ್ದು ಕುಸಿದು ಬಿದ್ದ ಈ ರಸ್ತೆಮಾರ್ಗದಲ್ಲಿ ಟ್ಯಾಕ್ಟರ್ಗಳು ಸಂಚರಿಸಲು ಸಾಧ್ಯವಾಗದೇ ಇರುವುದರಿಂದ ಈ ಭಾಗದ ರೈತರು ತಾವು ಬೆಳೆದ ಕಬ್ಬನ್ನು ಕಾರ್ಖಾನೆಗೆ ಹೇಗೆ ತಲುಪಿಸುವುದು ಎಂಬ ಚಿಂತೆಯಲ್ಲಿದ್ದಾರೆ.
Advertisement