ಶಿವಮೊಗ್ಗ: ಪಂಜಾಬಿನ ಹೆಸರಾಂತ ಸಾಹಿತಿಗಳಾದ ಅಜೀತ್ ಕೌರ್ ಹಾಗೂ ಗುರುಬಚನ್ ಸಿಂಗ್ ಭುಲ್ಲರ್ ಅವರುಗಳು ೨೦೧೯ನೇ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಅಧ್ಯಕ್ಷ, ನಾಡೋಜ ಹಂಪ ನಾಗರಾಜಯ್ಯ ಅವರಿದ್ದ ಆಯ್ಕೆ ಸಮಿತಿ ಪುರಸ್ಕಾರಕ್ಕಾಗಿ ಈ ಇಬ್ಬರು ಸಾಹಿತಿಗಳನ್ನು ಆಯ್ಕೆ ಮಾಡಿದೆ.
ಪ್ರಶಸ್ತಿಯು ಲಕ್ಷ ರೂ. ನಗದು, ಬೆಳ್ಳಿ ಪದಕಗಳನ್ನು ಒಳಗೊಂಡಿರಲಿದ್ದು 2019 ಡಿಸೆಂಬರ್ 29ರಂದು ಕುಪ್ಪಳಿಯಲ್ಲಿನಡೆಯುವ ಕುವೆಂಪು ಜನ್ಮದಿನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನೆರವೇರಲಿದೆ.
ಅಜೀತ್ ಕೌರ್
೧೯೩೪, ನವೆಂಬರ್ ೧೬ರಂದು ಅಂದಿನ ಭಾರತದ ಭಾಗವಾಗಿದ್ದ ಲಾಹೋರ್ ನಲ್ಲಿ ಜನಿಸಿರುವ ಅಜೀತ್ ಕೌರ್ ಪಂಜಾಬಿ ಭಾಷೆಯ ಖ್ಯಾತ ಬರಹಗಾರ್ತಿ, ಕವಿ, ಕಾದಂಬರಿಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದಿರುವ ಈಕೆ ಕೇಂದ್ರ ಸಾಹಿತ್ಯ ಅಕಾಡೆಮಿ, ಪದ್ಮಶ್ರೀ ಸೇರಿದಂತೆ ಅನೇಕ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಇದೀಗ ಫೌಂಡೇಷನ್ ಆಫ್ ಸಾರ್ಕ್ ರೈಟರ್ಸ್ ಆ್ಯಂಡ್ ಲಿಟರೇಚರ್ ಸಂಸ್ಥೆ ಅಧ್ಯಕ್ಷರಾಗಿ, ಅಕಾಡೆಮಿ ಆಫ್ ಪೈನ್ ಆರ್ಟ್ಸ್ ಆ್ಯಂಟ್ ಲಿಟರೇಚರ್ ಸಂಸ್ಥೆ ಮುಖ್ಯಸ್ಥರಾಗಿ, ಇಂಡಿಯನ್ ಕೌನ್ಸಿಲ್ ಫಾರ್ ಪಾವರ್ಟಿ ಆಲಿವಿಯೇಷನ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗುರುಬಚನ್ ಸಿಂಗ್ ಭುಲ್ಲರ್
೧೯೩೭ ಮಾರ್ಚ್ ೧೮ರ<ದು ಜನಿಸಿದ ಗುರುಬಚನ್ ಸಿಂಗ್ ಭುಲ್ಲರ್ ಪಂಜಾಬಿ ಕಥಾ ಸಾಹಿತ್ಯಲೋಕದ ಪ್ರಸಿದ್ದ ಹೆಸರು. ಸೋವಿಯತ್ ರಷ್ಯಾ ರಾಯಭಾರ ಕಚೇರಿಯಲ್ಲಿಸೇವೆ ಸಲ್ಲಿಸಿರುವ ಇವರು ಪಂಜಾಬಿ ಟ್ರಿಬ್ಯೂನ್ ಪತ್ರಿಕೆ ಸಂಪಾದಕರಾಗಿ ಸಂಪಾದಕೀಯ ಲೇಖನಗಳಿಗೂ ಸಾಹಿತ್ಯದ ಲೇಪವನ್ನು ನೀಡಿದ್ದರು. "ಅಗ್ನಿ ಕಲಾಸ್", "ಓಪ್ರಾ ಮಾರ್ಡ್", "ವಕ್ತಾನ್ ದೊರೆ" ಮೊದಲಾದವು ಇವರ ಪ್ರಸಿದ್ದ ಕೃತಿಗಳಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿ ಅನೇಕ ಪ್ರಶಸ್ತಿ ಪುರಸ್ಕಾರಕ್ಕೆ ಬಾಜನವಾಗಿರುವ ಇವರಿಗೆ ಈ ಸಾಲಿನ ಕುವೆಂಪು ಪುರಸ್ಕಾರ ಲಭಿಸಿದೆ.
Advertisement