ರಾಜ್ಯದ ಪ್ರವಾಹ ಪರಿಸ್ಥಿತಿ: ಸಮರೋಪಾದಿ ಪರಿಹಾರ ಕ್ರಮಕ್ಕೆ ಸೂಚನೆ- ಆರ್.ಅಶೋಕ್
ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೆಳಗಾವಿ, ಕೊಪ್ಪಳ, ರಾಯಚೂರು, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಧಾರವಾಡ, ಹಾವೇರಿ, ಉಡುಪಿ, ಉ.ಕನ್ನಡ, ಶಿವಮೊಗ್ಗ, ದ.ಕನ್ನಡ, ಮಂಡ್ಯ ದಲ್ಲಿ ಭಾರಿ ಮಳೆಯಿಂದ ಸುಮಾರು 5444 ಮನೆಗಳು ಹಾನಿಗೀಡಾಗಿವೆ ಎಂದು ವಿವರ ನೀಡಿದರು.
ಬೆಳಗಾವಿಯಲ್ಲಿ ಮಳೆಗೆ ಒಟ್ಟು ಸಾವಿರ ಮನೆ, ದಾವಣಗೆರೆ 210, ಬಾಗಲಕೋಟೆ 600, ಚಿತ್ರದುರ್ಗ 180, ಧಾರವಾಡ 1814, ಹಾವೇರಿ 1513, ಉಡುಪಿ 2, ಶಿವಮೊಗ್ಗ 92, ಉತ್ತರ ಕನ್ನಡ 10, ದ.ಕನ್ನಡ 23 ಮನೆಗಳು ಹಾನಿಗೀಡಾಗಿವೆ ಎಂದು ತಿಳಿಸಿದರು.
ಮಳೆಯ ಆರ್ಭಟಕ್ಕೆ ಸುಮಾರು 12 ಮಂದಿ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ. ಬೆಳಗಾವಿಯಲ್ಲಿ 2, ಕೊಪ್ಪಳ 4, ರಾಯಚೂರು 1, ಬಾಗಲಕೋಟೆ 1, ಧಾರವಾಡ 1, ಮಂಡ್ಯ 1, ಹಾವೇರಿ 2 ಮಂದಿ ಸಾವಿಗೀಡಾಗಿದ್ದಾರೆ. ಮೃತರ ಕುಟುಂಬಗಳಿಗೆ ಐದು ಲಕ್ಷ ರೂ ಪರಿಹಾರ ನೀಡಲು ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇನ್ನು ಜಲಪ್ರಳಯಕ್ಕೆ ಸಮಾರು 45 ಜಾನುವರುಗಳು ಸತ್ತಿದ್ದು, ಒಟ್ಟು 12 ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. 2176 ಸಂತ್ರಸ್ತರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿಸಿದರು.
ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ನೆರೆ ಪೀಡಿತ ಸ್ಥಳಗಳಿಗೆ ತೆರಳಿ ಅಲ್ಲಿನ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡುವಂತೆ ನಿರ್ದೇಶನ ನೀಡಲಾಗಿದೆ. ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಲಾಗಿದ್ದು, ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ನಾನು ಬೆಳಗಾವಿ ಮತ್ತು ಯಾದಗಿರಿಗೆ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದರು.
ನೆರೆ ಪರಿಹಾರಕ್ಕೆ ಯಾವುದೇ ರೀತಿಯ ಹಣದ ಕೊರತೆ ಇಲ್ಲ. ತುಮಕೂರು ಹಾಗೂ ವಿಜಯಪುರ ಜಿಲ್ಲಾಧಿಕಾರಿ ಖಾತೆಯಲ್ಲಿ ಹಣ ಕಡಿಮೆ ಇತ್ತು. ಕೂಡಲೇ ಹಣ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಎರಡನೇ ಬಾರಿ ಸಂಭವಿಸಿರುವ ನೆರೆ ಹಾನಿ ಸಂಬಂಧ ವರದಿ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ