ಸಂಚಾರಿ ದಂಡದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರಿಗೆ ಪೊಲೀಸರ ಹೊಸ ಐಡಿಯಾ.!
ಬೆಂಗಳೂರು: ದೇಶಾದ್ಯಂತ ಈಗ ಸಂಚಾರಿ ನಿಯಮದ ದಂಡದ್ದೇ ಸುದ್ದಿ... ದುಬಾರಿ ದಂಡಕ್ಕೆ ಬೇಸ್ತು ಬಿದ್ದಿರುವ ವಾಹನ ಸವಾರರು ಸಂಚಾರಿ ದಂಡ ದಂಡದಿಂದ ತಪ್ಪಿಸಿಕೊಳ್ಳಲು ಪೊಲೀಸರೇ ಹೊಸ ಉಪಾಯ ಸೂಚಿಸಿದ್ದಾರೆ.
ಹೌದು.. ದೇಶಾದ್ಯಂತ ಹೊಸ ಮೋಟಾರ್ ವೆಹಿಕಲ್ ಕಾಯ್ದೆ ಜಾರಿಯಾಗಿದ್ದೆ ತಡ ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಭರ್ಜರಿ ದಂಡ ವಸೂಲಿ ಮಾಡುತ್ತಿದ್ದಾರೆ. ಹೊಸ ಜಾರಿ ನಂತರ ಕೆಲವು ವಾಹನ ಸವಾರರಲ್ಲಿ ಗೊಂದಲಗಳು ಆರಂಭವಾಗಿದ್ದು, ವಾಹನಗಳಿಗೆ ಸಂಬಂಧಿಸಿದ ಮೂಲಪ್ರತಿಗಳನ್ನು ಚಾಲನೆ ವೇಳೆ ಕಡ್ಡಾಯವಾಗಿ ಹೊಂದಿರಬೇಕೆ ಎನ್ನುವ ಪ್ರಶ್ನೆಗೆ ಬೆಂಗಳೂರು ಪೊಲೀಸರು ಇದೀಗ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು, ವಾಹನದ ಮೂಲ ದಾಖಲೆಗಳನ್ನು ಯಾವಾಗಲೂ ಕೊಂಡೊಯ್ಯಬೇಕು ಎಂದೇನಿಲ್ಲ, ಆದರೆ ಅವುಗಳ ಸಾಫ್ಟ್ ಕಾಪಿಯನ್ನು ತೋರಿಸಿದರೂ ಸಾಕು ಎಂದು ಹೇಳಿದ್ದಾರೆ. ಸಾಫ್ಟ್ ಕಾಪಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.
ಇನ್ನು ಈ ಹಿಂದೆ ವಾಹನ ಚಾಲನೆ ವೇಳೆ ಈ ಹಿಂದೆ ಡಿಎಲ್, ಆರ್ಸಿ ಪ್ರಮಾಣ ಪತ್ರಗಳ ಮೂಲ ಪ್ರತಿಯನ್ನೇ ಹೊಂದಿರಬೇಕೆಂಬ ನಿಯಮವಿತ್ತು. ಆದರೆ ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಯೋಜನೆಯಡಿ ಪರಿಚಯಿಸಿರುವ ಡಿಜಿ ಲಾಕರ್ ಆ್ಯಪ್ನಲ್ಲಿಯೇ ನಿಮ್ಮ ವಾಹನಗಳ ದಾಖಲೆಗಳನ್ನು ಹೊಂದಿರಲು ಅವಕಾಶ ನೀಡಲಾಗಿದ್ದು, ಈ ಹಿನ್ನಲೆಯಲ್ಲಿ ವಾಹನ ಸವಾರರು ಡಿಜಿ ಲಾಕರ್ ಹೊಂದಿದ್ದರೆ ದಾಖಲೆಗಳು ಮೂಲ ಪ್ರತಿಯನ್ನೇ ಹೊಂದಿರಬೇಕಿಲ್ಲವೆಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ಮೋಟಾರ್ ವೆಹಿಕಲ್ ಕಾಯ್ದೆ 1988ರ ಪ್ರಕಾರ ವಾಹನ ತಪಾಸಣೆ ವೇಳೆ ಡಿಜಿ ಲಾಕರ್ ಅಥವಾ ಎಮ್ಪರಿವಾಹನ್ ಆ್ಯಪ್ ಮೂಲಕವೂ ವಾಹನ ದಾಖಲೆಗಳನ್ನು ಮಾನ್ಯತೆ ಮಾಡಬಹುದು ಎಂದು ಸ್ಪಷ್ಟಪಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ