ಕಾರವಾರ: ಬ್ರಿಟೀಷ್ ಏರ್ವೇಸಿನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಯುವಜೋಡಿಯೊಂದು ಐವತ್ತಕ್ಕೂ ಹೆಚ್ಚು ಮಂದಿಗೆ ಲಕ್ಷಾಂತರ ರು. ವಂಚಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ನಡೆದಿದೆ.
ಬ್ರಿಟಿಷ್ ಏರ್ವೇಸ್ನಲ್ಲಿ ಗ್ರೌಂಡ್ ಸ್ಟಾಫ್ ಆಗಿ ಉದ್ಯೋಗ ಕೊಡಿಸುವುದಾಗಿ ಹೇಳಿ ಕಾರವಾರದ ಶಿರವಾಡ ನಿವಾಸಿ ಮಾರ್ವಿನ್ ಡಿಸೋಜಾ ಹಾಗೂ ಯಲ್ಲಾಪುರದ ಅಂಕಿತ ರಾಯ್ಕರ್ 54 ಮಂದಿ ನಿರುದ್ಯೋಗಿ ಯುವಕರನ್ನು ವಂಚಿಸಿದ್ದಾರೆ.ಈ ಸಂಬಂಧ ಕಾರವಾರ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ ವಿವರ
ಕಾರವಾರದ ಮಾರ್ವಿನ್ ಡಿಸೋಜಾ ತಾನು ಟಿಷ್ ಏರ್ವೇಸ್ನಲ್ಲಿ ಗ್ರೌಂಡ್ ಸ್ಟಾಫ್ ಕೆಲಸ ಕೊಡಿಸುವುದಾಗಿ ಹೇಳಿ ಹಾಸನ, ಹೊನ್ನಾವರ, ಸಿದ್ಧಾಪುರ, ಶಿರಸಿಸೇರಿ ವಿವಿಧ ಪ್ರದೇಶಗಳ 54 ಮಂದಿಯಿಂದ ತಲಾ 1-1.50 ಲಕ್ಷ ರು. ಪಡೆಇದ್ದಾನೆ.ಬ್ರಿಟಿಷ್ ಏರ್ವೇಸ್ನ ಸಿಬ್ಬಂದಿ ನೇಮಕಾತಿಗೆ ತನಗೆ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ತಾನು ನೇಮಕಾತಿ ಪ್ರಕ್ರಿಯೆ ನಡೆಸಲು ನಿರ್ಧರಿಸಿರುವುದಾಗಿ ಹೇಳಿ ಉದ್ಯೋಗಾಕಾಂಕ್ಷಿಗಳಿಂಡ ಹಣ ಕಿತ್ತಿದ್ದಾನೆ. ಇದಕ್ಕೆ ಸರಿಯಾಗಿ ಅವರನ್ನು ನಂಬಿಸಲು ಅವರಿಗೆಲ್ಲಾ ಆಫರ್ ಲೆಟರ್, ಸಮವಸ್ತ್ರ, ನಕಲಿ ಗುರುತಿನ ಚೀಟಿಗಳನ್ನು ಸಹ ನೀಡಿದ್ದ.
ಇದಷ್ಟೇ ಅಲ್ಲದೆ ಅವರನ್ನೆಲ್ಲಾ ಬೆಂಗಳೂರಿಗೆ ಕರೆತಂದು ಅಲ್ಲಿನ ಕೂಡ್ಲು ಗೇಟ್ ಬಳಿಯ ನೋವಲ್ ಟೆಕ್ ಪಾರ್ಕ್ನಲ್ಲಿ ರಾತ್ರಿ ಪಾಳಿಯಲ್ಲಿ ಎರಡು ತಿಂಗಳು ತರಬೇತಿಯನ್ನೂನಿಡಿದ್ದನೆಂದು ಪೋಲೀಸರು ವಿವರಿಸಿದ್ದಾರೆ ಈ ತರಬೇತಿಯ ವೇಳೆ ತನ್ನ ಗೆಳತಿ ಅಂಕಿತ ರಾಯ್ಕರ್ ಳನ್ನು ಏರ್ ವೇಸ್ ನ ಅಸಿಸ್ಟೆಂಟ್ ಹೆಚ್.ಆರ್ ಝಾರಾ ಖಾನ್ ಎಂಬ ಹೆಸರಲ್ಲಿ ಪರಿಚಯ ಮಾಡಿಸಿಕೊಟ್ಟಿದ್ದ. ಆಕೆಯ ಮೂಲಕವೇ ಯುವಕ, ಯುವತಿಯರಿಗೆ ತರಬೇತಿ ನೀಡಲಾಗಿತ್ತು..ಇನ್ನು ಬೆಂಗಳೂರಿಗೆ ತರಬೇತಿಗೆಂದು ಆಗಮಿಸಿದವರು ವಸತಿ, ಊಟದ ವ್ಯವಸ್ಥೆಗಾಗಿ ಪ್ರತ್ಯೇಕವಾಗಿ ಹಣ ಖರ್ಚು ಮಾಡಿದ್ದಾರೆ. ಕಡೆಗೊಮ್ಮೆ ಸೆಪ್ಟೆಂಬರ್ 12ರೊಳಗೆ ನಿಮಗೆಲ್ಲ ಕರೆ ಬರಲಿದೆ,ಅಂದಿನಿಂದಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೀವೆಲ್ಲರೂ ಉದ್ಯೋಗಕ್ಕೆ ಸೇರ್ಪಡೆಗೊಳ್ಳಬಹುದು ಎಂದು ಹೇಳಿದ್ದ ಆರೋಪಿ ಮಾರ್ವಿನ್ ತಾನು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ.
ಆದರೆ ಆತನ ಮಾತನ್ನು ನಂಬಿದ್ದ ಯುವಕ, ಯುವತಿಯರು ಸೆಪ್ಟೆಂಬರ್ 12ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿ;ಲ್ದಾಣಕ್ಕೆ ಕೆಲಸಕ್ಕೆ ಸೇರಲಿಕ್ಕಾಗಿ ಆಗಮಿಸಿದ್ದಾರೆ. ಅದಾಗ ತಾವು ವಂಚನೆಗೊಳಗಾಗಿರುವುದು ತಿಳಿದಿದೆ. ತಕ್ಷಣ ತರಬೇತುದಾರ ಮಾರ್ವಿನ್ ನ ಸಂಪರ್ಕಕ್ಕೆ ಯತ್ನಿಸಿದರೂ ಸಾಧ್ಯವಾಗಿಲ್ಲ. ಆತನ ಫ್ಲ್ಯಾಟ್ ಗೆ ಹೋದಾಗ ಆರೋಪಿ ಜೋಡಿ ಹಿಂದಿನ ದಿನ ಮಧ್ಯರಾತ್ರಿಯೇ ಖಾಲಿ ಮಾಡಿರುವುದು ಪತ್ತೆಯಾಗಿದೆ.
ಆರೋಪಿ ಜೋಡಿ 54 ಮಂದಿಯಿಂದ ಸರಿಸುಮಾರು 70 ಲಕ್ಷ ರು. ಹಣ ಪಡೆದು ಪರಾರಿಯಾಗಿದೆ. ಈ ಸಂಬಂಧ ನೊಂದ ಯುವಕ, ಯುವತಿಯರು ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ದೂರು ಸಲ್ಲಿಸಲು ತೆರಳಿದಾಗ ಅಲ್ಲಿ ಪೋಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಕಾರವಾರ ಠಾಣೆಯಲ್ಲೇ ದೂರು ಸಲ್ಲಿಸಿ ಎಂದು ಕೇಳಿದ್ದಾರೆ. ಅದರಂತೆ ಅವರೆಲ್ಲಾ ಕಾರವಾರಕ್ಕೆ ತೆರಳಿ ಅಲ್ಲಿನ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.
Advertisement