ಬೆಂಗಳೂರು: ದೇಶಾದ್ಯಂತ ಕೊರೋನಾ ಹಾವಳಿಯಿಂದಾಗಿ ಲಾಕ್ ಡೌನ್ ವಿಧಿಸಲಾಗಿದ್ದು, ಇಎಂಐ ಪಾವತಿ ಸಡಿಲಿಕೆ ಸೇರಿದಂತೆ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಆರ್ಥಿಕ ವಿಷಯಗಳಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
ಈಗ ಕಿಡಿಗೇಡಿಗಳು ಇದನ್ನೇ ಬಂಡವಾಳವನ್ನಾಗಿಟ್ಟುಕೊಂಡಿದ್ದು, ಇಎಂಐ ಪಾವತಿಯನ್ನು ಮುಂದೂಡಿರುವ ನೆಪವನ್ನಿಟ್ಟುಕೊಂಡು ವಂಚನೆಗೆ ಮುಂದಾಗುತ್ತಿರುವ ಪ್ರಕರಣಗಳು ಬಯಲಾಗತೊಡಗಿವೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಜನತೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯವಿದ್ದಲ್ಲಿ, ಇಎಂಐ ಮುಂದೂಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಇದನ್ನೇ ದುರುಪಯೋವನ್ನಾಗಿ ಮಾಡಿಕೊಳ್ಳುತ್ತಿರುವ ಸೈಬರ್ ಕ್ರಿಮಿನಲ್ ಗಳು ಜನಸಾಮಾನ್ಯರಿಗೆ ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡುತ್ತಾರೆ. ಇಎಂಐ ಮುಂದೂಡುವ ಸೌಲಭ್ಯವಿದೆ, ಬಡ್ಡಿ ಮನ್ನಾ ಸೌಲಭ್ಯವಿದೆ ಎಂದು ಹೇಳಿ ಬ್ಯಾಂಕ್ ಖಾತೆ, ಕಾರ್ಡ್ ವಿವರ ಹಾಗೂ ಒಟಿಪಿಗಳನ್ನೂ ಗ್ರಾಹಕರಿಂದ ಪಡೆದು, ಖಾತೆಯಲ್ಲಿರುವ ಹಣವನ್ನು ದೋಚುತ್ತಿದ್ದಾರೆ.
ಬ್ಯಾಂಕ್ ನ ಗ್ರಾಹಕರು ಬ್ಯಾಂಕ್ ಹೆಸರಿನಲ್ಲಿ ಬರುವ ಯಾವುದೇ ಕರೆಗಳಲ್ಲಿ ಒಟಿಪಿ ಕೇಳಿದರೆ ಎಚ್ಚರ ವಹಿಸಬೇಕಾಗಿದೆ. ಈ ಬಗ್ಗೆ ಐಪಿಎಸ್ ಅಧಿಕಾರಿ ಡಿ ರೂಪಾ ಸಹ ಟ್ವೀಟ್ ಮಾಡಿದ್ದು, ಆನ್ ಲೈನ್ ವಂಚನೆ ಬಗ್ಗೆ ಎಚ್ಚರಿಕೆಯಿಂದ ಇರಲು ಕರೆ ನೀಡಿದ್ದಾರೆ.
Advertisement