ಕೊರೋನಾ: ಜಾಗೃತಿ ಮೂಡಿಸಬೇಕಾದ ಆರೋಗ್ಯ ಇಲಾಖೆಯಿಂದಲೇ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ! 

ಮಾರಣಾಂತಿಕ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರವನ್ನು ಕಾಪಾಡಿ, ಆರೋಗ್ಯದ ಬಗ್ಗೆ ಗಮನ ಹರಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸಬೇಕಾದವರೇ ಸಾಮಾಜಿಕ ಅಂತರದ ನಿಯಮವನ್ನು ಉಲ್ಲಂಘಿಸಿದ ಪ್ರಸಂಗ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಾಗಲಕೋಟೆ: ಮಾರಣಾಂತಿಕ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರವನ್ನು ಕಾಪಾಡಿ, ಆರೋಗ್ಯದ ಬಗ್ಗೆ ಗಮನ ಹರಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸಬೇಕಾದವರೇ ಸಾಮಾಜಿಕ ಅಂತರದ ನಿಯಮವನ್ನು ಉಲ್ಲಂಘಿಸಿದ ಪ್ರಸಂಗ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಮುಧೋಳದ ಮದರಸಾದಲ್ಲಿದ್ದ ಗುಜರಾತ್ ಮೂಲಕ ವ್ಯಕ್ತಿಯೊಬ್ಬರಲ್ಲಿ ಕೊರೋನಾ ವೈರಸ್ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆ ವ್ಯಕ್ತಿಯೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 50 ಜನರನ್ನು ಇಂದು ಸಂಜೆ ಕ್ವಾರಂಟೈನ್ ಮಾಡಲು ಆರೋಗ್ಯ ಇಲಾಖೆ ಮುಧೋಳದಿಂದ ಒಂದೇ ಬಸ್‌ನಲ್ಲಿ ಕರೆದುಕೊಂಡು ಬಂದಿದೆ.

ಸೋಂಕಿತ ವ್ಯಕ್ತಿಯೊಂದಿಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನೆಲ್ಲ ಒಂದೇ ಬಸ್‌ನಲ್ಲಿ ಒಟ್ಟಿಗೆ ಕರೆ ತಂದಿದೆ. ಬಳಿಕ ಅವರನ್ನೆಲ್ಲ ಪರೀಕ್ಷೆಗೆ ಒಳಪಡಿಸಿ ನಗರದ ಹೊರ ವಲಯದಲ್ಲಿರುವ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ವಿಷಯದ ಅದಲ್ಲಿ ಕೊರೋನಾ ವೈರಸ್ ಹರಡುವಿಕೆ ತಡೆಯಲು ಸಾಮಾಜಿಕ ಅಂತರ ಕಾಪಾಡವುದೊಂದೆ ಮಾರ್ಗ ಎಂದು ಜಿಲ್ಲಾಡಳಿತ ಜನಾಂದೋಲನವನ್ನೇ ಕೈಗೊಂಡಿದೆ. ವ್ಯಕ್ತಿಗಳ ನಡುವಿನ ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದಲೇ ದೇಶವೇ ಲಾಕ್‌ಡೌನ್ ಆಗಿದೆ. ವ್ಯಾಪಾರ, ವಹಿವಾಟು ಬಂದ್ ಆಗಿವೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಕೆಲವರಿಗೆ ಪೊಲೀಸರು ಲಾಠಿಯ ರುಚಿ ತೋರಿಸಿದ್ದಾರೆ. ಸಾವಿರಾರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 

ತರಕಾರಿ, ದಿನಸಿ ಖರೀದಿಗಾಗಿ ಮುಗಿ ಬೀಳುವ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರದ ಜತೆಗೆ ಸ್ವಯಂ ಸೇವಾ ಸಂಘಟನೆಗಳು, ಸರ್ಕಾರಿ ಯಂತ್ರವೇ ಅಹೋರಾತ್ರಿ ಕಾರ್ಯ ನಿರ್ವಹಿಸುತ್ತಿದೆ.

ಸಾಮಾಜಿಕ ಅಂತರ ನಿಯಮ ಪಾಲನೆ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿಯ ಸುತ್ತಲಿನ ಪ್ರದೇಶವನ್ನೆಲ್ಲ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಮುಧೋಳ ವಿಧಾನಸಭೆ ಕ್ಷೇತ್ರದ ಶಾಸಕರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರೆ ಮುಧೋಳದಲ್ಲಿ ಸ್ವತಃ ರಸ್ತೆಗಿಳಿದು, ಮೈಕ್ ಹಿಡಿದು ಕೊರೋನಾ ವೈರಸ್ ತಡೆಗೆ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮನೆ ಬಿಟ್ಟು ಹೊರಬೇಡಿ, ಗುಂಪು ಗುಂಪಾಗಿ ಬೆರೆಯಬೇಡಿ ಎಂದು ಮನವಿ ಮಾಡಿದ್ದಾಗಿದೆ. ಜತೆಗೆ ತಾಲೂಕು ಆಡಳಿತ ಸಹ ಮುಧೋಳದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನಿತ್ಯವೂ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.

ಕೊರೋನಾ ವೈರಸ್ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಎಷ್ಟೆಲ್ಲ ಪ್ರಯತ್ನಗಳು ಸರ್ಕಾರ ಮತ್ತು ಜನತೆಯಿಂದ ನಡೆಯುತ್ತಿರುವಾಗ ಸೋಂಕು ದೃಢಪಟ್ಟ ವ್ಯಕ್ತಿಯೊಂದಿಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕ ಹೊಂದಿದವ 50 ಜನರನ್ನು ಗುರುತಿಸಿ ಅವರನ್ನೆಲ್ಲ ಒಂದೇ ಬಸ್‌ನಲ್ಲಿ ಮುಧೋಳದಿಂದ 65 ಕಿಮಿ ದೂರದಲ್ಲಿರುವ ಬಾಗಲಕೋಟೆಗೆ ಕರೆತಂದು ಪರೀಕ್ಷೆಗೆ ಒಳ ಪಡಿಸಿ, ಕ್ವಾರಂಟೈನ್ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 

ಒಂದೇ ಬಸ್‌ನಲ್ಲಿ ಬಾಗಲಕೋಟೆಗೆ ಕರೆ ತರುವಾಗ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಜತೆಗೆ ಕೆಲವರು ಮಾಸ್ಕ್ ಧರಿಸಿದ್ದರೆ, ಇನ್ನೂ ಕೆಲವರು ಮಾಸ್ಕ್ ಧರಿಸಿರಲಿಲ್ಲ ಎನ್ನವುದು ಆತಂಕಕಾರಿ ಸಂಗತಿಯಾಗಿದೆ.
50 ಜನರನ್ನು ಒಂದೇ ಬಸ್‌ನಲ್ಲಿ ಕರೆ ತರಲು ಜಿಲ್ಲಾಡಳಿತ ಅನುಮತಿ ನೀಡಿದ್ದಾದರೂ ಹೇಗೆ ಎನ್ನುವುದು ಯಕ್ಷಪ್ರಶ್ನೆಯಾಗಿದ್ದು, ಸಾಮಾಜಿಕ  ಅಂತರ ನಿಯಮ ಉಲ್ಲಂಘಿಸಿ 50 ಜನರನ್ನು ಮುಧೋಳದಿಂದ ಬಾಗಲಕೋಟೆವರೆಗೂ ಕರೆತಂದ ಪ್ರಕರಣ ಯಾವ ಹಂತದಲ್ಲಿ ತಲುಪಲಿದೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.

-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com