ಬೆಂಗಳೂರು: ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ಕಾರ್ಯಾಚರಣೆ ನಡೆಸಿರುವ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್ ಎಂಬಾತನನ್ನು ಬಂಧಿಸಿದ್ದಾರೆ.
ಬೆಂಗಳೂರು: ಪಾದರಾಯನಪುರದಲ್ಲಿ ಚೆಕ್ ಪೋಸ್ಟ್ ನಾಶ ಮಾಡಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಇರ್ಫಾನ್ ಎ-1 ಆಗಿದ್ದ. ಈತನ ಬಂಧನಕ್ಕಾಗಿ ಜಗಜೀವನ ರಾಂ ನಗರ ಪೊಲೀಸರು ಕಳೆದೊಂದು ವಾರದಿಂದ ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಬಂಧನ ಸಾಧ್ಯವಾಗಿರಲಿಲ್ಲ. ಪ್ರಮುಖ ಆರೋಪಿ ಬೆಂಗಳೂರಿನಲ್ಲೇ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿಯಾಗಿ ಇರ್ಫಾನ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತೆಯೇ ಅತನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 150ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದೀಗ ಗಲಾಟೆಯ ಮಾಸ್ಚರ್ ಮೈಂಡ್ ಇರ್ಫಾನ್ನನ್ನೂ ಕೂಡ ಬಂಧಿಸಿದ್ದಾರೆ. ಇರ್ಫಾನ್ ಲೇಡಿ ಡಾನ್ ಫರ್ಜುವಾ ಜೊತೆ ಸೇರಿ ದಂಗೆ ಎಬ್ಬಿಸಿ ತಲೆಮರಿಸಿಕೊಂಡಿದ್ದ. ಈ ಹಿಂದೆ ಕೆಎಫ್ಡಿ (ಕರ್ನಾಟಕ ಫೋರಂ ಫಾರ್ ಡಿಗ್ನಿಟಿ) ಸಂಘಟನೆಯಲ್ಲಿ ಇರ್ಫಾನ್ ಎಂದು ಗುರುತಿಸಿಕೊಂಡಿದ್ದ. ಕೆಎಫ್ ಡಿಯ ಇರ್ಫಾನ್ ಕೇವಲ ಆ ಸಂಘಟನೆಯಲ್ಲಿ ಮಾತ್ರ ಇರಲಿಲ್ಲ. ಕಳೆದ ಬಾರಿ ಎಸ್ಡಿಪಿಐಯಿಂದ ಕಾರ್ಪೋರೇಷನ್ ಎಲೆಕ್ಷನ್ ಗೆ ನಿಂತು ಸೋತಿದ್ದ. ಈ ಮೂಲಕ ಎಸ್ ಡಿಪಿಐ ಅಲ್ಲಿ ಕೂಡ ಈತ ಗುರುತಿಸಿಕೊಂಡಿದ್ದ. ಗಲಾಟೆ ಸಂದರ್ಭದಲ್ಲಿ ತನ್ನ ಜೊತೆ ಇದ್ದ ಹುಡುಗರಿಗೆ ಬ್ಯಾರಿಕೇಡ್ ಹಾಗೂ ಚೆಕ್ ಪೋಸ್ಟ್ ಪೆಂಡಾಲ್ ಧ್ವಂಸಗೊಳಿಸುವಂತೆ ಸೂಚಿಸಿದ್ದ ಎನ್ನಲಾಗಿದೆ.
ಈತನ ಪ್ರಚೋದನೆಯಿಂದ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ತೆರಳಿದ್ದ ಆಶಾ ಕಾರ್ಯಕರ್ತರು ಹಾಗೂ ವೈದ್ಯರ ಮೇಲೆ ಹಲ್ಲೆ ನಡೆಸಲಾಗಿತ್ತು. ಅಲ್ಲದೆ, ಟೆಂಟ್ಗಳನ್ನು ಕಿತ್ತುಹಾಕಿ ದಾಂಧಲೆ ನಡೆಸಲಾಗಿತ್ತು. ರಾತ್ರಿವೇಳೆಯಲ್ಲಿ ನಡೆದ ಈ ಪ್ರಕರಣದಲ್ಲಿ ಈಗಾಗಲೇ ಪೊಲೀಸರು 60ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.
Advertisement