ಅರಿಶಿಣ ಗಣೇಶ (ಸಂಗ್ರಹ ಚಿತ್ರ)
ಅರಿಶಿಣ ಗಣೇಶ (ಸಂಗ್ರಹ ಚಿತ್ರ)

ಗಣೇಶ ಹಬ್ಬ: ಮಾಲಿನ್ಯ ನಿಯಂತ್ರಣಕ್ಕೆ ಅರಿಶಿಣ ಗಣೇಶ ವಿಗ್ರಹಗಳ ಮಾಸ್ಚರ್ ಪ್ಲಾನ್!

ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾಲಿನ್ಯ ನಿಯಂತ್ರಣ ಸಂಬಂಧ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅರಿಶಿಣ ಗಣೇಶ ವಿಗ್ರಹಗಳ ಮಾಸ್ಚರ್ ಪ್ಲಾನ್ ರೂಪಿಸಿದೆ.
Published on

ಬೆಂಗಳೂರು: ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾಲಿನ್ಯ ನಿಯಂತ್ರಣ ಸಂಬಂಧ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅರಿಶಿಣ ಗಣೇಶ ವಿಗ್ರಹಗಳ ಮಾಸ್ಚರ್ ಪ್ಲಾನ್ ರೂಪಿಸಿದೆ.

ಹೌದು.. ಗಣೇಶ ಹಬ್ಬದ ಹೆಸರಿನಲ್ಲಿ ಪಿಒಪಿಗಳ ಆರ್ಭಟ ನಗರದಲ್ಲಿ ಜೋರಾಗಿದ್ದು, ಇದರ ನಡುವೆಯೇ ಕೊರೋನಾ ಮಹಾಮಾರಿ ಒಕ್ಕರಿಸಿದೆ. ಇದೇ ಕಾರಣಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮನೆಯಲ್ಲಿ ನಿರ್ಮಿಸಿದ ಗಣೇಶ ಮೂರ್ತಿಗಳಿಗೆ ಆಧ್ಯತೆ ನೀಡುವಂತೆ ಮನವಿ ಮಾಡುತ್ತಿದ್ದು, ಇದಲ್ಲದೇ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸೂಚಿಸಿದೆ. 

ಇನ್ನು ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆಯೇ ಅರಿಶಿಣದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅರಿಶಿಣದಲ್ಲಿ ಮಾಡಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಮನವಿ ಮಾಡಿದೆ. ಅರಿಶಿಣದಲ್ಲಿ ವೈರಸ್ ನಿಯಂತ್ರಿಸುವ ಶಕ್ತಿ ಇದ್ದು, ಇದೇ ಕಾರಣಕ್ಕೆ ಮಂಡಳಿ ಆಗಸ್ಟ್ 22ರಂದು 10 ಲಕ್ಷ ಅರಿಶಿಣದಲ್ಲಿ ತಯಾರಿಸಿದ ಗಣೇಶ ಮೂರ್ತಿಗಳನ್ನು ಕೂರಿಸುವ ಗುರಿ ಹೊಂದಿದೆ. 

ಈ ಕುರಿತಂತೆ ಎಲ್ಲ ಬಗೆಯ ಸಾಮಾಜಿಕ ಜಾಲತಾಣಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಚಾರ ಅಭಿಯಾನ ಆರಂಭಿಸಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್ ಸೈಟ್, ಫೇಸ್ ಬುಕ್ ಮತ್ತು ಯೂಟ್ಯೂಬ್ ನಲ್ಲಿ ಮಂಡಳಿ ಈ ಕುರಿತ ಪ್ರಚಾರ ಅಭಿಯಾನ ಆರಂಭಿಸಿದೆ. ಇದರ ಜೊತೆಗೇ ರೇಡಿಯೋದಲ್ಲೂ ಈ ಕುರಿತಂತೆ ಪ್ರಚಾರ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಹಾಲಿನ ಪ್ಯಾಕೆಟ್ ಗಳ ಮೇಲೂ ಪರಿಸರ ಸ್ನೇಹಿ ಗಣಶ ಮೂರ್ತಿಗಳ ಕುರಿತು ಪ್ರಚಾರ ನಡೆಸಲು ಚಿಂತಿಸಿದೆ. ಅಂತೆಯೇ ಸಿಹಿ ತಿನಿಸುಗಳ ಬಾಕ್ಸ್, ಅಗರ್ ಬತ್ತಿ ಪ್ಯಾಕೆಟ್ ಗಳ ಮೇಲೂ ಈ ಕುರಿತು ಮುದ್ರಿಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ, ಕೆ.ಎಸ್.ಪಿ.ಸಿ.ಬಿ. ಕಾರ್ಯದರ್ಶಿ ಶ್ರೀನಿವಾಸುಲು ಅವರು, ಅರಿಶಿಣದಲ್ಲಿ ಯಥೇಚ್ಛ ನೈಸರ್ಗಿಕ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಇನ್ ಫ್ಲಮೇಟರಿ ಮತ್ತು ಆ್ಯಂಟಿಬಾಡಿಕ್ ಅಂಶಗಳು ನಮ್ಮ ಮನೆಯನ್ನು ಸ್ಯಾನಿಟೈಜ್ ಮಾಡುತ್ತವೆ. ಅಲ್ಲದೆ ನಮ್ಮ ಪರಿಸರ ಅಥವಾ ವಾತಾವರಣದಲ್ಲಿರುವ ಸೂಕ್ಷ್ಮಾಣುಗಳನ್ನು ಕೊಲ್ಲುತ್ತವೆ ಎಂದು ಹೇಳಿದ್ದಾರೆ.

ಗಣೇಶ ಮೂರ್ತಿಗಳನ್ನು ತಯಾರಿಸಲು ಬಳಸಲಾಗುವ ಮಣ್ಣಿನ ಸಂಗ್ರಹಣೆಗೆ ಗಿಡಮರಗಳನ್ನು ಕಡಿಯಲಾಗುತ್ತದೆ. ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಣ್ಣಿನ ಬದಲಿಗೆ ಅರಿಶಿಣ ಮೂರ್ತಿಗಳನ್ನು ಮಾಡುವುದರಿಂದ ಮಣ್ಣಿನ ಸಂರಕ್ಷಣೆಯಾಗುತ್ತದೆ. 10 ಲಕ್ಷ ಮನೆಗಳು ಅರಿಶಿಣ ಗಣೇಶ ಮೂರ್ತಿಗಳನ್ನು ಬಳಕೆ ಮಾಡುವುದರಿಂದ 10 ಲಕ್ಷ ಮನೆಗಳಲ್ಲಿ ಬಳಕೆಯಾಗಬೇಕಿದ್ದ ಮಣ್ಣು ರಕ್ಷಣೆ ಮಾಡಿದಂತಾಗುತ್ತದೆ. ಅರಿಶಿಣ ಗಣೇಶ್ ಮೂರ್ತಿಗಳನ್ನು ಬಕೆಟ್ ನಲ್ಲಿಯೇ ಮುಳುಗಿಸಿ ಸುಲಭವಾಗಿ ಕರಗಿಸಬಹುದು. ಹೀಗೆ ಕರಗಿದ ನೀರನ್ನು ನಮ್ಮ ಮನೆಯಲ್ಲಿ ಗಿಡಗಳಿಗೆ ಬಳಕೆ ಮಾಡಬಹುದು. ಇದರಿಂದ ಯಾವುದೇ ರೀತಿಯ ದುಷ್ಪರಿಣಾಮಗಳಿಲ್ಲ ಎಂದು ಶ್ರೀನಿವಾಸುಲು ಹೇಳಿದ್ದಾರೆ. 

ನೀವೂ ಕೂಡ ಅರಿಶಿಣದಲ್ಲಿ ಗಣೇಶನನ್ನು ಮಾಡಬೇಕು ಎಂದರೆ ಇಲಾಖೆಯ ವೆಬ್ ಸೈಟ್ ನೋಡಿ, ಅಥವಾ ಈ ಕೆಳಗಿನ ಯೂಟ್ಯೂಬ್  ಲಿಂಕ್ ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು.
https://kspcb.gov.in/default.asp

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com