ಬೆಂಗಳೂರು: ಮಳೆಗಾಲ ಅಥವಾ ಪ್ರವಾಹದ ಸಂದರ್ಭಗಳಲ್ಲಿ ಯಾವುದೇ ರಾಜ್ಯದ ಜಲಾಶಯಗಳಿಂದ ನೀರು ಹೊರ ಬಿಡುವ ಮುನ್ನ ನೀರು ಹರಿದು ಹೋಗುವ ನೆರೆ ರಾಜ್ಯಗಳಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ರೀತಿಯ ಮಾಹಿತಿ ನೀಡುವುದರಿಂದ ರಾಜ್ಯಗಳು ಪ್ರವಾಹ ಪರಿಸ್ಥಿತಿ ತಗ್ಗಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಅದು ತಿಳಿಸಿದೆ. ಈ ಕುರಿತು ತುಮಕೂರಿನ ಗುಬ್ಬಿ ತಾಲೂಕು ಚೇಳೂರು ಗ್ರಾಮದ ಎ.ಮಲ್ಲಿಕಾರ್ಜುನ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮುಖ್ಯ
ನ್ಯಾಯಮೂರ್ತಿ ಎ.ಎಸ್.ಓಕಾ ಅವರನ್ನೊಳಗೊಂಡ ವಿಭಾಗೀಯ ಪೀಠ ಹೈಕೋರ್ಟ್ ಗೆ ಸೂಚನೆ ನೀಡಿತ್ತು. ಕರ್ನಾಟಕ ಹೈಕೋರ್ಟ್ ನ ಆದೇಶದ ಪ್ರತಿ ಅನ್ವಯ ಕೇಂದ್ರ ಸರ್ಕಾರ ಈ ಸೂಚನೆ ಹೊರಡಿಸಿದೆ.
ಜುಲೈ 24, 2020 ರಂದು, ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 10 ರ ಅಡಿಯಲ್ಲಿರುವ ಅಧಿಕಾರಗಳನ್ನು ಪರಿಗಣಿಸಲು ಮತ್ತು ಅಗತ್ಯವಿದ್ದಾಗ ನೆರೆಯ ರಾಜ್ಯಗಳನ್ನು ಪರಿಗಣಿಸಿ ರಾಜ್ಯ ಸರ್ಕಾರಗಳಿಗೆ ಆದೇಶ ನೀಡುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ನ್ಯಾಯಪೀಠ ನಿರ್ದೇಶನ ನೀಡಿತ್ತು.
ಇದರ ನಿರ್ದೇಶನದಂತೆ ಯಾವುದೇ ರಾಜ್ಯ, ಅಥವಾ ಕೇಂದ್ರಾಡಳಿತ ಪ್ರದೇಶ ಅಥವಾ ಪ್ರಾಧಿಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಜಲಾಶಯಗಳಿಂದ ನೀರು ಬಿಡುವ ಮುನ್ನ ಸಂಬಂಧಿಸಿದ ಪ್ರಾಧಿಕಾರಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿತ್ತು.
ಸಂಭವನೀಯ ವಿಪತ್ತನ್ನು ಸ್ವೀಕರಿಸುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವನ್ನು ಮುನ್ಸೂಚಿಸುವ ಉದ್ದೇಶದಿಂದ ಈ ನಿರ್ದೇಶನಗಳನ್ನು ವಿಪತ್ತು ನಿರ್ವಹಣಾ ಕಾಯ್ದೆಯ ಸಂದರ್ಭದಲ್ಲಿ ಮಾತ್ರ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
Advertisement