ಐಫೋನ್ ತಯಾರಿಕೆಯ ವಿಸ್ಟ್ರಾನ್ ಕಂಪನಿಯಲ್ಲಿ ಹಿಂಸಾಚಾರ; 7 ಸಾವಿರ ಮಂದಿ ವಿರುದ್ಧ ಪ್ರಕರಣ, 149 ಮಂದಿ ಬಂಧನ

ಕೋಲಾರದ ಹೊರವಲಯದ ವಿಸ್ಟ್ರಾನ್ ಪ್ರೈವೇಟ್ ಲಿಮಿಟೆಡ್ನ ಐಫೋನ್ ಮೊಬೈಲ್ ಅಸೆಂಬ್ಲಿಂಗ್ ಘಟಕದಲ್ಲಿ ನಡೆದ ದಾಂಧಲೆ ಹಿಂಸಾಚಾರ ಪ್ರಕರಣದ ಸಂಬಂಧ ಸುಮಾರು 7 ಸಾವಿರ ಮಂದಿ ವಿರುದ್ಧ ಕೇಸ್ ದಾಖಲಾಗಿದೆ.
ಐಫೋನ್ ತಯಾರಿಕಾ ಘಟಕ
ಐಫೋನ್ ತಯಾರಿಕಾ ಘಟಕ
Updated on

ಬೆಂಗಳೂರು: ಕೋಲಾರದ ಹೊರವಲಯದ ವಿಸ್ಟ್ರಾನ್ ಪ್ರೈವೇಟ್ ಲಿಮಿಟೆಡ್ನ ಐಫೋನ್ ಮೊಬೈಲ್ ಅಸೆಂಬ್ಲಿಂಗ್ ಘಟಕದಲ್ಲಿ ನಡೆದ ದಾಂಧಲೆ ಹಿಂಸಾಚಾರ ಪ್ರಕರಣದ ಸಂಬಂಧ ಸುಮಾರು 7 ಸಾವಿರ ಮಂದಿ ವಿರುದ್ಧ ಕೇಸ್ ದಾಖಲಾಗಿದೆ.

ಕಳೆದ ಮೂರು ತಿಂಗಳಿನಿಂದ ನಮಗೆ ವೇತನ ನೀಡಿಲ್ಲ ಎಂದು ಆಕ್ರೋಶಗೊಂಡು ಡಿ.12ರಂದು ವಿಸ್ಟ್ರಾನ್ ಘಟಕದಲ್ಲಿ ನೂರಾರು ನೌಕರರು ಪ್ರತಿಭಟನೆ ನಡೆಸಿ ಕಲ್ಲು ತೂರಾಟ ನಡೆಸಿ ಪೀಠೋಪಕರಣಗಳಿಗೆ ಬೆಂಕಿ ಇಟ್ಟು, ಐಫೋನ್ ಕಂಪ್ಯೂಟರ್ ಸೇರಿದಂತೆ ಹಲವು ವಸ್ತುಗಳನ್ನ ಒಡೆದು ಹಾಕಿ ದಾಂಧಲೆ  ನಡೆಸಿದ್ದರು. ದಾಂಧಲೆ ವೇಳೆ ಘಟಕದಲ್ಲಿ ಸಾವಿರಾರು ಐಫೋನ್ ಗಳ ಲೂಟಿಯಾಗಿದೆ. ಇದರಿಂದ ನಮಗೆ 437 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಕಂಪನಿಯ ಪ್ರತಿನಿಧಿಗಳು ಪೊಲೀಸರಿಗೆ ಹಾಗೂ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದಾರೆ.

ಸುಮಾರು 300 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು 149 ಜನರನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಎಚ್.ಡಿ ಕ್ವಾಲಿಟಿ ಇರುವ 'ಸಿಟಿವಿ ಕ್ಯಾಮೆರಾ ಮತ್ತು ವಾಟ್ಸಪ್ ಚಾಟ್, ಕರೆಯನ್ನು ಆಧರಿಸಿ ಕೃತ್ಯ ಎಸಗಿದ್ದವರನ್ನು ಬಂಧಿಸಲಾಗುತ್ತಿದೆ. 6 ಖಾಸಗಿ ಏಜೆನ್ಸಿಗಳ  ಮೂಲಕ 8,490 ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕರು ಹಾಗೂ 1,343 ಕಾರ್ಮಿಕರನ್ನು ಕಾಯಂ ನೌಕರರನ್ನಾಗಿ ವಿಸ್ಕಾನ್ ಕಂಪನಿ ನೇಮಿಸಿಕೊಂಡಿತ್ತು. ಈಗಾಗಲೇ ಕಂಪನಿ ಆಡಳಿತ ಮಂಡಳಿ, ಅಸಿಸ್ಟೆಂಟ್ ಮ್ಯಾನೇಜರ್ ವೇಮಗಲ್ ಪೊಲೀಸ್ ಠಾಣೆಯಲ್ಲಿ ಕಾರ್ಮಿಕರ ವಿರುದ್ದ ಪ್ರತ್ಯೇಕ ಮೂರು ಪ್ರತ್ಯೇಕ  ಎಫ್‌ಐಆರ್ ದಾಖಲು ಮಾಡಿದ್ದಾರೆ.

ಒಟ್ಟು 7 ಸಾವಿರ ಕಾರ್ಮಿಕರ ವಿರುದ್ದ ದೂರು ನೀಡಿದ್ದು, ಇದರಲ್ಲಿ 5 ಸಾವಿರ ಕಾರ್ಮಿಕರು ಪ್ರಮುಖ ಆರೋಪಿಗಳು ಅಂದರೆ ಎ-1 ಎಂದು, 2 ಸಾವಿರ ಕಾರ್ಮಿಕರು ಎ-2 ಆರೋಪಿಗಳೆಂದು ದೂರು ದಾಖಲಾಗಿದೆ. ಕಂಪನಿ ಉಪಕರಣ, ವಾಹನ, ಎಲೆಕ್ಟ್ರಾನಿಕ್ ಉಪಕರಣಗಳನ್ನ ಧ್ವಂಸ ಮಾಡಿದ್ದು, ಹತ್ತು ಕೋಟಿಯಷ್ಟು  ಎಲೆಕ್ಟ್ರಾನಿಕ್ ಉಪಕರಣಗಳು ಕಳುವಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದು, ದಾಂದಲೆ, ಆಸ್ತಿ ಪಾಸ್ತಿ ನಷ್ಟ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ದರೋಡೆ ಪ್ರಕರಣ ಸೇರಿ, ಐಪಿಸಿ ಸೆಕ್ಷನ್ 143, 147, 148, 149, 323, 395, 4-48, 45, 427, 504, 506 ಅಡಿ ಪ್ರಕರಣಗಳನ್ನು  ದಾಖಲಿಸಲಾಗಿದೆ.

ಕಂಪನಿಯಲ್ಲಿ ವೇತನ ನೀಡದ ಹಿನ್ನಲೆಯಲ್ಲಿ ಡಿ.10 ರಂದು ಕಾರ್ಮಿಕರು ದಾಂಧಲೆ ನಡೆಸಿ ಕಂಪನಿಯನ್ನು ಧ್ವಂಸ ಮಾಡಿದ್ದರು. ಈ ಸಂಬಂಧ ಇಲ್ಲಿಯವರೆಗೆ 149 ಕಾರ್ಮಿಕರನ್ನ ಪೊಲೀಸರು ಬಂಧಿಸಿದ್ದು, ದಾಂದಲೆಯಿಂದ 437.70 ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ, ಕೃತ್ಯದಲ್ಲಿ ಭಾಗಿಯಾಗಿದ್ದ  ಪ್ರತಿಯೊಬ್ಬರ ಮಾಹಿತಿ ಕಂಪನಿ ಸಿಬ್ಬಂದಿಯಿಂದ ಸಿಕ್ಕಿದ್ದು, 10 ಪೊಲೀಸ್ ತಂಡಗಳಿಂದ ವಿಚಾರಣೆ ನಡೆಯುತ್ತಿದೆ. ಪ್ರಕರಣ ಈಗ ವಿಚಾರಣೆ ಹಂತದಲ್ಲಿದ್ದು, ದಾಂಧಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಎರಡು ಮೂರು ತಿಂಗಳಲ್ಲಿ ಮತ್ತೆ ಕಂಪನಿ ಆರಂಭವಾಗಲಿದೆ. ಎಲ್ಲಾ ಕೈಗಾರಿಕೆಗಳ ಮುಖ್ಯಸ್ಥರನ್ನ  ಶಾಸಕರೊಂದಿಗೆ ಸಭೆ ಕರೆದು ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ತಿಳಿಸಿದರು.

ವಿಸ್ಟ್ರನ್ ಕಂಪನಿ ಕಾರ್ಮಿಕರ ವೇತನ ಪಾವತಿ ಮತ್ತು ಹಾಜರಾತಿ ದಾಖಲೆಪತ್ರ ನಿರ್ವಹಣೆಯಲ್ಲಿ ಉಂಟಾದ ಗೊಂದಲ, ಕಾರ್ಮಿಕರು ಹಾಗೂ ಆಡಳಿತ ವರ್ಗದವರ ನಡುವೆ ಬಾಂಧವ್ಯ ಹದಗೆಟ್ಟ ಹಿನ್ನಲೆಯಲ್ಲಿ ದಾಂದಲೆ ನಡೆದಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com