ಕೋಲಾರ: ವಿಸ್ಟ್ರಾನ್ ಕಾರ್ಖಾನೆಯ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಮತ್ತು ಮಾಲೀಕರ ವೈಫಲ್ಯದಿಂದ ಇಂತಹ ಘಟನೆ ನಡೆದಿದ್ದು, ವಿನಾಕಾರಣ ಎಸ್ಎಫ್ಐ ಸಂಘಟನೆಯ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಎಸ್ಎಫ್ಐ ತಿಳಿಸಿದೆ.
ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ. ವಾಸುದೇವಾರೆಡ್ಡಿಯವರು, ಘಟನೆ ನಡೆದು ತನಿಖೆ ಪ್ರಾರಂಭಿಕ ಹಂತದಲ್ಲಿ ಇರುವಾಗ ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಕ್ಷೇತ್ರದ ಸಂಸದ ಎಸ್ಎಫ್ಐ ಸಂಘಟನೆಯ ಕೈವಾಡವಿದೆ ಎಂದು ಹೇಳಿ, ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಕೂಡಲೇ ಸಂಸದರು ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಗುತ್ತಿಗೆ ಏಜೆನ್ಸಿ ಪಡೆದವರು ಸರಿಯಾಗಿ ವೇತನ ಮತ್ತು ಮೂಲಭೂತ ಸೌಕರ್ಯ ನೀಡುತ್ತಿದ್ದಾರೆಯೇ? ಕಾರ್ಮಿಕ ಕಾನೂನು ಉಲ್ಲಂಘನೆಯಾಗುತ್ತಿದೆಯೇ? ಎಂಬುದರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ವಿಸ್ಟ್ರಾನ್ ಘಟನೆಯಲ್ಲಿ ಎಸ್ಎಫ್ಐ ತಾಲೂಕು ಅಧ್ಯಕ್ಷ ಶ್ರೀಕಾಂತ್ ಪಾತ್ರ ಏನೂ ಇಲ್ಲ. ಆದರೂ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ಡಿಸೆಂಬರ್ 19 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ.
Advertisement