ಭಯ ಬಿಟ್ಹಾಕಿ, ನಿರಾತಂಕವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಿ: ಪೋಷಕರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಯ 

ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಲಹೆ ಮತ್ತು ಮಾರ್ಗದರ್ಶನ ಮೇರೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ರಾಜ್ಯದಲ್ಲಿ ನಾಡಿದ್ದು ಜನವರಿ 1ರಂದು ಹೊಸವರ್ಷ 10 ಮತ್ತು 12ನೇ ತರಗತಿಗಳು ಪ್ರಾರಂಭವಾಗುತ್ತಿವೆ.
ಶಾಲೆಯ ತರಗತಿಯ ಸಾಂದರ್ಭಿಕ ಚಿತ್ರ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್
ಶಾಲೆಯ ತರಗತಿಯ ಸಾಂದರ್ಭಿಕ ಚಿತ್ರ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್
Updated on

ಬೆಂಗಳೂರು: ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಲಹೆ ಮತ್ತು ಮಾರ್ಗದರ್ಶನ ಮೇರೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ರಾಜ್ಯದಲ್ಲಿ ನಾಡಿದ್ದು ಜನವರಿ 1ರಂದು ಹೊಸವರ್ಷ 10 ಮತ್ತು 12ನೇ ತರಗತಿಗಳು ಪ್ರಾರಂಭವಾಗುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಉಳಿದ ತರಗತಿಗಳಿಗೆ ಸರ್ಕಾರ ವಿದ್ಯಾಗಮ ಕಾರ್ಯಕ್ರಮವನ್ನು ಮುಂದುವರಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಇಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ವಿವಿಧ ಶಾಲಾ-ಕಾಲೇಜುಗಳಿಗೆ ತೆರಳಿ ಅಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳು, ಶಿಷ್ಠಾಚಾರಗಳು, ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. 

ವಿದ್ಯಾರ್ಥಿಗಳಿಗೆ ಮತ್ತು ಬೋಧಕ ವರ್ಗದವರಿಗೆ ಶಾಲಾ-ಕಾಲೇಜು ಆರಂಭಿಸಲು ಆಸಕ್ತಿಯಿದೆಯೇ, ಅವರು ಯಾವ ರೀತಿ ತಯಾರಾಗಿದ್ದಾರೆ ಎಂದು ತಿಳಿದುಕೊಂಡರು. ವಿದ್ಯಾರ್ಥಿಗಳ ಪೋಷಕರನ್ನು ಕೂಡ ಶಾಲೆಗಳಿಗೆ ಬರಲು ತಿಳಿಸಲಾಗಿತ್ತು.
ಈ ಸಂದರ್ಭದಲ್ಲಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಯಾವುದೇ ಭಯ, ಆತಂಕವಿಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿಸಿ, ಇಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆಯು ನಮ್ಮೊಂದಿಗೆ ಸಮಯಕ್ಕೆ ಸರಿಯಾಗಿ ಕೈಜೋಡಿಸುತ್ತಿದೆ. ಅಷ್ಟಾಗಿಯೂ ನಿಮ್ಮಲ್ಲಿ ಭಯ, ಆತಂಕವಿದ್ದರೆ ಮಕ್ಕಳನ್ನು ಕಳುಹಿಸಲೇಬೇಕೆಂಬ ಒತ್ತಡವೇನಿಲ್ಲ, ಶಾಲೆಗೆ ಬರುವುದು ಕಡ್ಡಾಯವಲ್ಲ, ಸ್ವಯಂಪ್ರೇರಿತ ಎಂದು ತಿಳಿಸಿದರು.

ಶಾಲೆಗೆ ಹೋದರೆ ಮಕ್ಕಳು ಚೆನ್ನಾಗಿ ಕಲಿಯುವುದು, ಶಿಕ್ಷಕರ ಬಳಿಯೇ ಕಲಿಯಬೇಕು, ಆನ್ ಲೈನ್ ಶಿಕ್ಷಣ ಅಷ್ಟು ನಮ್ಮ ಮಗುವಿಗೆ ಪರಿಣಾಮಕಾರಿಯಿಲ್ಲ, ನಮ್ಮ ಮಗು ಶಾಲೆಗೆ ಹೋಗಲಿ ಎಂದು ಒಪ್ಪಿಗೆ ಪತ್ರ ಕೊಟ್ಟು ಕಳುಹಿಸಬೇಕು ಎಂದು ಹೇಳಿದರು. ಶಾಲೆಯಲ್ಲಿ ಮಾಸ್ಕ್ ಧರಿಸಿಕೊಂಡು ಬಂದು, ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ಯಾನಿಟೈಸರ್ ಹಾಕಿಕೊಂಡು ಪಾಠ ಮಾಡಲಾಗುತ್ತದೆ ಎಂದು ಭರವಸೆ ಕೊಟ್ಟರು.

ಶಾಲೆ ಆರಂಭಿಸಿದ್ದು ಏಕೆ?: ಕೋವಿಡ್-19 ಲಾಕ್ ಡೌನ್ ಸಡಿಲಿಕೆಯಾದ ನಂತರ ಬೇರೆಲ್ಲಾ ಚಟುವಟಿಕೆಗಳು ಆರಂಭವಾಗಿದೆ. ಶಾಲೆಗಳನ್ನು ಆರಂಭಿಸದೆ ಎಷ್ಟು ದಿನ ಮುಂದೂಡುವುದು, ಮಕ್ಕಳು ನೇರವಾದ ತರಗತಿಗಳನ್ನು ಕೇಳುವುದರಿಂದ ಶಾಲೆಗಳಿಗೆ ಬರದೆ ಎಷ್ಟು ದಿನ ಮನೆಯಲ್ಲಿರುವುದು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಗಳೂರಿನಲ್ಲಿರುವ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಸಿಗುತ್ತಿದೆ, ಆದರೆ ಕುಗ್ರಾಮಗಳಲ್ಲಿರುವ ಬಡವರ ಮಕ್ಕಳು ಆನ್ ಲೈನ್, ಆಫ್ ಲೈನ್ ಎರಡೂ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಅನೇಕ ಕಡೆ ಮಕ್ಕಳನ್ನು ಬಾಲ ಕಾರ್ಮಿಕತೆಗೆ ಕಳುಹಿಸಲಾಗುತ್ತಿದೆ, ಹದಿಹರೆಯಕ್ಕೆ ಬಂದ ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹ ಮಾಡಲಾಗುತ್ತಿದೆ ಎಂಬ ದೂರುಗಳು ಅನೇಕ ಹಿಂದುಳಿದ ಜಿಲ್ಲೆಗಳಿಂದ ಬಂದಿದೆ. ಮಕ್ಕಳು ಕಲಿಕೆಯಿಂದ ದೂರವುಳಿಯುತ್ತಿದ್ದಾರೆ, ಮಕ್ಕಳಲ್ಲಿ ನಿರಂತರ ಕಲಿಕೆ ಮುಂದುವರಿಯಬೇಕು ಎಂದು ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂದರು.

ಒಂದು ವೇಳೆ ಶಾಲೆಗೆ ಬಂದ ಮಕ್ಕಳಿಗೆ ಶೀತ, ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡರೆ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಅವರಿಗೆ ಬೇಕಾದ ಸೂಕ್ತ ವೈದ್ಯಕೀಯ ಚಿಕಿತ್ಸೆಯ ನೆರವು ನೀಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com