ಕೃಷಿಕರು-ನೀರಾವರಿಗೆ ನಮ್ಮ ಮೊದಲ ಆದ್ಯತೆ: ಬಜೆಟ್ ಬಗ್ಗೆ ಸಿಎಂ ಹೇಳಿಕೆ
ಶಿವಮೊಗ್ಗ: ಮಾರ್ಚ್ 5 ಕ್ಕೆ ಬಜೆಟ್ ಮಂಡನೆ ಮಾಡುವುದು ನಿಶ್ಚಿತವಾಗಿದ್ದು, ಅದಕ್ಕೆ ಪೂರ್ವಭಾವಿ ಸಿದ್ಧತೆಗಳೆಲ್ಲಾ ಪ್ರಾರಂಭವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಬಜೆಟ್ ನಲ್ಲಿ ನೀರಾವರಿ, ಕೃಷಿಕರಿಗೆ ಹೆಚ್ಚಿನ ಆದ್ಯತೆ ಕೊಟ್ಟು ಹಣಕಾಸಿನ ಇತಿ ಮಿತಿ ಒಳಗೆ ಬಜೆಟ್ ಮಂಡನೆ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ ಎಂದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ತೆರಿಗೆ ಹಣವನ್ನು ಕಡಿತಗೊಳಿಸಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಲು ಯಡಿಯೂರಪ್ಪ ನಿರಾಕರಿಸಿದರು.
ಶಿವಮೊಗ್ಗ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮಂಜೂರು ಆಗಿದ್ದು, ಕೈಗಾರಿಕೆಗಳು ಬರಲು ವಿಮಾನ ನಿಲ್ದಾಣ ಆಗಬೇಕಿದ್ದು ಅದಕ್ಕೆ ಕ್ಲಿಯರೆನ್ಸ್ ಸಿಕ್ಕಿದೆ. ಶೀಘ್ರದಲ್ಲೆ ಕೆಲಸ ಪ್ರಾರಂಭ ಆಗಲಿದೆ ಎಂದರು.
ಸಿಗಂದೂರು ಸೇತುವೆ ಕೆಲಸವು ಪ್ರಾರಂಭ ಆಗುತ್ತಿದೆ. ಶಿವಮೊಗ್ಗ ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ಏನೇನು ಸಾಧ್ಯವಿದೆಯೋ ಅದನ್ನ ಮುಂದಿನ ಮೂರು ವರ್ಷದಲ್ಲಿ ಪೂರ್ಣ ಮಾಡುವ ಯೋಚನೆ ಇದೆ. ಅದಕ್ಕೆ ಶಾಸಕರು ಬೆಂಬಲ ನೀಡುತ್ತಿದ್ದಾರೆ ಎಂದರು.
ಮುಂದಿನ ಮೂರೂವರೆ ವರ್ಷದಲ್ಲಿ ಇನ್ನೂ ಅಭಿವೃದ್ಧಿ ಮಾಡಲಾಗುತ್ತದೆ. 15ನೇ ಹಣಕಾಸು ಹಂಚಿಕೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಕೊರತೆ ವಿಚಾರವಾಗಿ ಗಮನಹರಿಸಿ, ಚರ್ಚೆ ನಡೆಸಲಾಗುವುದು ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ