ಉಡುಪಿ: ಭಾರತ - ಅಮೆರಿಕ ಸಂಬಂಧ ಬಲಗೊಳ್ಳಬೇಕು ಎಂಬ ಅಪೇಕ್ಷೆ ಬಹು ಕಾಲದಿಂದ ಇತ್ತು. ಇದೀಗ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ಪ್ರವಾಸದಿಂದ ಇದು ಸಾಕಾರಗೊಳ್ಳಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತಕ್ಕೆ ಅಮೆರಿಕದ ನೆರವಿನ ಅಗತ್ಯವಿದೆ. ಅನೇಕ ವರ್ಷದಿಂದ ಅಮೆರಿಕಾದ ಮೇಲೆ ಭಾರತಕ್ಕೆ ಸಂಶಯವಿತ್ತು. ಅಮೆರಿಕಾ ಪಾಕ್ ಗೆ ಶಸ್ತ್ರಾಸ್ತ್ರ ನೀಡುತ್ತದೆ ಎನ್ನುವ ಸಂಶಯ ಭಾರತಕ್ಕೆ ಇತ್ತು. ಅಮೆರಿಕದ ಶಸ್ತ್ರಾಸ್ತ್ರಗಳು ಪಾಕ್ ಭಯೋತ್ಪಾದಕರ ಕೈಸೇರುವ ಸಂಶಯವಿತ್ತು.
ಟ್ರಂಪ್ ಅಮೆರಿಕಾದ ಶಕ್ತಿಶಾಲಿ ಅಧ್ಯಕ್ಷ. ಮೋದಿ ಭಾರತದ ಶಕ್ತಿಶಾಲಿ ಪ್ರಧಾನಿ. ಎರಡು ಪ್ರಬಲ ರಾಷ್ಟ್ರಗಳು ಒಟ್ಟಾಗಿ ಭಯೋತ್ಪಾದನೆ ನಿರ್ಮೂಲನೆ ಮಾಡುತ್ತವೆ. ಭಾರತದ ನೆಲದಲ್ಲಿ ಟ್ರಂಪ್ ಭಯೋತ್ಪಾದನೆ ವಿರುದ್ಧ ಮಾತನಾಡಿದ್ದಾರೆ. ಈ ಮೂಲಕ ಪಾಕ್ ಗೆ ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ. ಮೋದಿ ಮತ್ತು ಟ್ರಂಪ್ ರನ್ನು ಸಹಿಸಲಾಗದವರು ಎರಡೂ ದೇಶಗಳಲ್ಲಿ ಇದ್ದಾರೆ. ಟ್ರಂಪ್ ಭೇಟಿಯಿಂದ ಭಾರತಕ್ಕೆ ಬಹಳ ಅನುಕೂಲವಾಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಟ್ರಂಪ್ ಭೇಟಿಯನ್ನು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಟೀಕಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ನಾಯಕರು ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ಮೋದಿ ಟ್ರಂಪ್ ಗೆ ಸಿದ್ದರಾಮಯ್ಯನ ಪಾಠದ ಅಗತ್ಯವಿಲ್ಲ. ಕಾಂಗ್ರೆಸ್ ಮಾತನ್ನು ದೇಶದಲ್ಲಿ ಯಾರೂ ಕೇಳುವುದಿಲ್ಲ ಎಂದು ಸಂಸದೆ ಶೋಭಾ ವ್ಯಂಗ್ಯವಾಡಿದರು.
Advertisement