'ನೆರೆ ಪೀಡಿತ ಸ್ಥಳದ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳ ನೆರವು ಅಗತ್ಯ'

ಶಿಕ್ಷಣ ಇಲಾಖೆ ಅತಿ ದೊಡ್ಡ ಇಲಾಖೆಯಾಗಿದ್ದು, ನಾಡಿನ ಮಕ್ಕಳ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಸಮುದಾಯದ ಸಹಭಾಗಿತ್ವ ತೀರಾ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಬಲಪಡಿಸಲು ಖಾಸಗಿ ವಲಯ ಮುಂದಾಗಬೇಕು  ಶಿಕ್ಷಣ ಸಚಿವವ ಸುರೇಶ್ ಕುಮಾರ್ ಕರೆ ನೀಡಿದ್ದಾರೆ.
ಸುರೇಶ್ ಕುಮಾರ್
ಸುರೇಶ್ ಕುಮಾರ್
Updated on

ಬೆಂಗಳೂರು: ಶಿಕ್ಷಣ ಇಲಾಖೆ ಅತಿ ದೊಡ್ಡ ಇಲಾಖೆಯಾಗಿದ್ದು, ನಾಡಿನ ಮಕ್ಕಳ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಸಮುದಾಯದ ಸಹಭಾಗಿತ್ವ ತೀರಾ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಬಲಪಡಿಸಲು ಖಾಸಗಿ ವಲಯ ಮುಂದಾಗಬೇಕು  ಶಿಕ್ಷಣ ಸಚಿವವ ಸುರೇಶ್ ಕುಮಾರ್ ಕರೆ ನೀಡಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಬಲಪಡಿಸುವಲ್ಲಿ ಖಾಸಗಿ ಸಹಭಾಗಿತ್ವ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಅಗಾಧ ವಿಸ್ತಾರ ಹೊಂದಿರುವ ಶಿಕ್ಷಣ ಇಲಾಖೆಯ ಇಂದಿನ ಅಗತ್ಯಗಳನ್ನು ಪೂರೈಸಲು ಖಾಸಗಿ ಸಹಭಾಗಿತ್ವ ಅಗತ್ಯ ಮತ್ತು ಅನಿವಾರ್ಯವೂ ಆಗಿದೆ 

ನೆರೆ ಹಾವಳಿ ಸಂದರ್ಭದಲ್ಲೇ ಶಿಕ್ಷಣ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡ ನಾನು ಮಕ್ಕಳ ಪುಸ್ತಕ, ಪೆನ್ನುಗಳ ಸಮೇತ ಮನೆಗಳು ಮತ್ತು ಶಾಲೆಗಳು ಮುಳುಗಿ ಹೋದ ಘಟನೆಗಳನ್ನು ಕಣ್ಣಾರೆ ಕಂಡಿದ್ದೇನೆ. ಆ ಮಕ್ಕಳ ಶಿಕ್ಷಣಕ್ಕಾಗಿ ಸಮುದಾಯ ಬೆಂಬಲಕ್ಕೆ ನಿಲ್ಲಬೇಕಾದ ಅನಿವಾರ್ಯ ಕರ್ತವ್ಯವೂ ನಮ್ಮದಾಗಿದೆ. ನೆರೆ ಸಂದರ್ಭದಲ್ಲಿ ಮಕ್ಕಳನ್ನು ಸರ್ಕಾರಿ, ಅನುದಾನಿತ, ಅನುದಾನರಹಿತ ಎಂಬ ಭೇದವಿಲ್ಲದೇ ಎಲ್ಲರಿಗೂ ಇನ್ನೊಂದು ಸೆಟ್ ಪಠ್ಯಪುಸ್ತಕಗಳನ್ನು ಕೇವಲ ಮೂರು ವಾರದಲ್ಲಿ ಪೂರೈಸಲು ಕ್ರಮಕೈಗೊಳ್ಳಲಾಯಿತು ಎಂದು ಸಚಿವರು ತಿಳಿಸಿದರು.

ಶಾಲೆಗಳು ಮುಳುಗಿ, ನೆರೆ ಇಳಿದ ನಂತರ ಮಕ್ಕಳು ಶೆಡ್ ಗಳು, ತೆಂಗಿನ ಗರಿಯ ಚಪ್ಪರ, ತಗಡಿನ ನೆರಳಲ್ಲಿ ಪಾಠ ಪ್ರವಚನ ಆಲಿಸುತ್ತಿವಂತಹ ಅನುಭವಗಳನ್ನು ಕಂಡಿದ್ದೇನೆ. ಈ ಎಲ್ಲ ಲೋಪಗಳ ಹೊರತಾಗಿಯೂ ನಾವು ನಮ್ಮ ಮಕ್ಕಳ ಆತ್ಮವಿಶ್ವಾಸ ಕುಗ್ಗದಂತೆ ಕೆಲಸ ಮಾಡಬೇಕಾಗಿದ್ದು, ಎಲ್ಲ ರೀತಿಯಲ್ಲೂ ಇದಕ್ಕೆ ಸರ್ವರ ಅಪಾರ ಬೆಂಬಲ, ಸಹಾಯ, ಸಹಕಾರದ ಅಗತ್ಯವಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಶಾಲಾ ಮಕ್ಕಳಿಗಾಗಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏರ್ಪಡಿಸಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ನಮ್ಮ ರಾಜ್ಯದ 42 ಮಕ್ಕಳು ಆಯ್ಕೆಯಾಗಿದ್ದು, ಅದರಲ್ಲಿ 27 ಮಕ್ಕಳು ಸರ್ಕಾರಿ ಶಾಲೆ ಮಕ್ಕಳು ಎನ್ನುವುದು ನಿಜಕ್ಕೂ ಸಂತಸದ ಸಂಗತಿ. ನಮ್ಮ ಸರ್ಕಾರಿ ಶಾಲೆಗಳ ಹಾಗೂ ಸರ್ಕಾರಿ ಶಿಕ್ಷಕರ ಕಾರ್ಯಕ್ಷಮತೆ ಯಾವುದೇ ಖಾಸಗಿ ಶಾಲೆಗಳಿಗೆ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾದರಪಡಿಸಿವೆ. ಇದಕ್ಕೆ ನಮ್ಮ ಸಮುದಾಯದ ಬೆಂಬಲವೂ ದೊರೆತರೆ ನಮ್ಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು ಸಾಧ್ಯವಾಗುತ್ತದೆ ಎಂದು ಸುರೇಶ್ ಕುಮಾರ್ ಹೇಳಿದರು.

ಇದುವರೆಗೆ ಶಾಲಾ ಕಟ್ಟಡ, ಕೊಠಡಿಗಳನ್ನು ನಿರ್ಮಿಸಲು ಮುಂದಾಗುತ್ತಿದ್ದ ಭಾರತೀಯ ಯುವ ತೇರಾಪಂತ್ ಸಮಿತಿಯ ವಿಮಲ್ ಕಠಾರಿಯಾ ಅವರು, ಶಾಲೆಗಳಿಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡುವ ಉಪಕ್ರಮಕ್ಕೆ ಮುಂದಾಗಿದೆ. ಸಾಂಕೇತಿಕವಾಗಿ ಕಂಪ್ಯೂಟರ್, ಲ್ಯಾಪ್ ಟಾಪ್ ಸೆಟ್ ಗಳನ್ನು ಶಿಕ್ಷಣ ಇಲಾಖೆ ಆಯುಕ್ತರಿಗೆ ಹಸ್ತಾಂತರಿಸಿದರು.

ಥಿಂಕ್ ಥ್ರೂ ಕನ್ಸಲ್ಟೆಂಟ್ಸ್ ದೆಹಲಿ, ಬಿಐಎಲ್, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ , ಎಂಬೆಸಿ ಗ್ರೂಪ್, ಬಯೋಕಾನ್, ಸ್ಯಾಮ್ ಸಂಗ್, ಎಚ್ ಪಿ ಇಂಡಿಯಾ, ಮಕ್ಕಳ ಜಾಗೃತಿ, ಟಯೋಟಾ ಒಟ್ಟು 72ಕಂಪನಿಗಳಿಂದ 110 ಪ್ರತಿನಿಧಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com