ಬೆಳಗಾವಿ: ಬೆಳಗಾವಿ ನಮ್ಮದು, ಹೀಗಾಗಿ, ಗಡಿ ವಿವಾದ ಮುಗಿದ ಅಧ್ಯಾಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಇತ್ತೀಚೆಗೆ ಕೆಲವರು ವಿನಾಕಾರಣ ಗಡಿ ವಿಷಯ ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯ ಉದ್ದೇಶದಿಂದ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಇಲ್ಲಿನ ಜನರು ಪ್ರಚೋದನೆಗೆ ಒಳಗಾಗದೇ ಎಂದಿನಂತೆಯೇ ಸೌಹಾರ್ದದಿಂದ ಇರಬೇಕು. ಪ್ರಚೋದನೆ ಮಾಡುತ್ತಿರುವ ಮಹಾರಾಷ್ಟ್ರದ ಶಿವಸೇನೆಯವರಿಗೆ ಯಶಸ್ಸಾಗುವುದಿಲ್ಲ, ಗಡಿ ವಿಷಯದಲ್ಲಿ ಕಾನೂನು ಹೋರಾಟಕ್ಕೂ ಸರ್ಕಾರ ಸಿದ್ಧವಿದೆ’ ಎಂದರು.
ದೇಶದ ಅಭಿವೃದ್ಧಿಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪೂರಕವಾಗಿದೆ. ಇದು ಯಾರ ಪೌರತ್ವವನ್ನೂ ಕಿತ್ತುಕೊಳ್ಳುವುದಿಲ್ಲ. ಬದಲಿಗೆ ಪೌರತ್ವ ನೀಡುತ್ತದೆ. ಎಲ್ಲ ಭಾರತೀಯರೂ ಇದನ್ನು ಬೆಂಬಲಿಸಬೇಕು. ಈ ಕಾಯ್ದೆ ಜಾರಿಯಿಂದ ಗಣರಾಜ್ಯೋತ್ಸವ ಮತ್ತಷ್ಟು ಅರ್ಥಪೂರ್ಣವಾಗುತ್ತದೆ’ ಎಂದು ಹೇಳಿದರು.
Advertisement