ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಂಪರ್ಕಿತರ ಪತ್ತೆಹಚ್ಚುವ ಕಾರ್ಯ ಇಳಿಮುಖ!

ಕೊರೋನಾ ಸೋಂಕು ಸಂಪರ್ಕಿತರನ್ನು ಪತ್ತೆಹಚ್ಚುವಲ್ಲಿ ಕರ್ನಾಟಕ ಸರ್ಕಾರ ಮಾಡುತ್ತಿರುವ ಕೆಲಸಕ್ಕೆ ಕೆಲ ದಿನಗಳ ಹಿಂದೆ ಕೇಂದ್ರ ಆರೋಗ್ಯ ಸಚಿವಾಲಯ ಪ್ರಶಂಸೆ ಮಾಡಿತ್ತು. ನಂತರ ಕೇವಲ ಮೂರು ವಾರಗಳಲ್ಲಿ ಪತ್ತೆಹಚ್ಚುವ ಕಾರ್ಯ ರಾಜ್ಯದಲ್ಲಿ ಬಹಳ ಯಶಸ್ವಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೊರೋನಾ ಸೋಂಕು ಸಂಪರ್ಕಿತರನ್ನು ಪತ್ತೆಹಚ್ಚುವಲ್ಲಿ ಕರ್ನಾಟಕ ಸರ್ಕಾರ ಮಾಡುತ್ತಿರುವ ಕೆಲಸಕ್ಕೆ ಕೆಲ ದಿನಗಳ ಹಿಂದೆ ಕೇಂದ್ರ ಆರೋಗ್ಯ ಸಚಿವಾಲಯ ಪ್ರಶಂಸೆ ಮಾಡಿತ್ತು. ನಂತರ ಕೇವಲ ಮೂರು ವಾರಗಳಲ್ಲಿ ಪತ್ತೆಹಚ್ಚುವ ಕಾರ್ಯ ರಾಜ್ಯದಲ್ಲಿ ಬಹಳ ಯಶಸ್ವಿಯಾಗಿದೆ.

ಕಳೆದ ಗುರುವಾರ ಒಂದೇ ದಿನ ರಾಜ್ಯದಲ್ಲಿ 2 ಸಾವಿರದ 228 ಹೊಸ ಪ್ರಕರಣಗಳು ವರದಿಯಾಗಿದ್ದು 1,784 ಕೇಸುಗಳಲ್ಲಿ ಪತ್ತೆಹಚ್ಚುವ ಕೆಲಸ ಪ್ರಗತಿಯಲ್ಲಿದೆ. ಆದರೆ ಕೊರೋನಾ ಸೋಂಕಿತರನ್ನು ಸಂಪರ್ಕಿಸಿದವರ ಪತ್ತೆಹಚ್ಚುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ.

ಪ್ರಾಥಮಿಕ ಮತ್ತು ದ್ವಿತೀಯ ಹಂತದಲ್ಲಿ ಕೊರೋನಾ ಸೋಂಕಿನ ರೋಗಿಗಳೊಂದಿಗೆ ಸಂಪರ್ಕ ಹೊಂದಿದವರನ್ನು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಅಧಿಕಾರಿಗಳು ಸಂಪರ್ಕಿಸುತ್ತಿಲ್ಲ ಎಂಬ ಮಾತು ವಿರೋಧ ಪಕ್ಷಗಳ ನಾಯಕರಿಂದ ಮತ್ತು ಸಾಮಾನ್ಯ ಜನರಿಂದ ಕೇಳುತ್ತಿವೆ. ಜುಲೈ 3ರಿಂದ ಜುಲೈ 9ರ ನಡುವೆ ರಾಜ್ಯದಲ್ಲಿ ವರದಿಯಾದ 13 ಸಾವಿರದ 089 ಕೇಸುಗಳಲ್ಲಿ 10 ಸಾವಿರದ 230 ರೋಗಿಗಳ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಲೇ ಇದೆ. ಇದುವರೆಗೆ ಕೊರೋನಾ ಸೋಂಕಿತರನ್ನು ಸಂಪರ್ಕಿಸಿದವರ ಸಂಪರ್ಕ ಕಾರ್ಯ ಸಣ್ಣ ಪ್ರಮಾಣದಲ್ಲಿ ಆಗಿದೆಯಷ್ಟೆ. ಕಳೆದ ಗುರುವಾರ 13 ಸಾವಿರದ 395 ಮಂದಿಗೆ ಹೇಗೆ, ಎಲ್ಲಿಂದ ಸೋಂಕು ತಗುಲಿದೆ ಎಂಬುದೇ ಗೊತ್ತಾಗಿಲ್ಲ.

ನಮ್ಮ ಮನೆಯ ಕೆಲಸದವರಿಗೆ ಸೋಂಕು ತಗುಲಿದ ನಂತರ ಯಾರ್ಯಾರು ಅವರನ್ನು ಸಂಪರ್ಕಿಸಿದರು, ಎಲ್ಲಿಂದ ಸೋಂಕು ಬಂದಿದೆ ಎಂಬ ಪತ್ತೆಹಚ್ಚುವಿಕೆಯಲ್ಲಿ ಆರೋಗ್ಯಾಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸಿಯೇ ಇಲ್ಲ. ನಮ್ಮ ಪರಿಸ್ಥಿತಿಯೇ ಹೀಗಾದರೆ ಸಾಮಾನ್ಯ ಜನರ ಪಾಡೇನು ಎಂದು ಶಾಸಕ ದಿನೇಶ್ ಗುಂಡೂರಾವ್ ಪತ್ನಿ ತಬು ಸೋಷಿಯಲ್ ಮೀಡಿಯಾದಲ್ಲಿ ಕೇಳಿದ್ದರು.

ಸಾಮಾನ್ಯ ನಾಗರಿಕರೂ ಇಂತಹ ಕಳವಳ ವ್ಯಕ್ತಪಡಿಸಿದ್ದಾರೆ. ಜೂನ್ ತಿಂಗಳಲ್ಲಿ ಸಚಿವರೊಬ್ಬರ ಮನೆಯವರಿಗೆ ಕೊರೋನಾ ಸೋಂಕು ಎಂದು ದೃಢಪಟ್ಟಾಗ ಅವರ ಪ್ರಾಥಮಿಕ ಸಂಪರ್ಕಕ್ಕೆ ಯಾರ್ಯಾರು ಬಂದಿದ್ದರು ಎಂದು ಪತ್ತೆಹಚ್ಚಲು ಪತ್ತೆ ಹಚ್ಚುವ ಕರೆ ಬಿಬಿಎಂಪಿಯಿಂದ ಬಂದೇ ಇಲ್ಲ ಎಂದು ಸಚಿವರ ಖಾಸಗಿ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸದ್ಯ ಸಾಯುವವರ ಸಂಖ್ಯೆಯನ್ನು ಕಡಿಮೆ ಮಾಡಬೇಕೆ ಹೊರತು ಸಂಪರ್ಕಿತರನ್ನು ಪತ್ತೆಹಚ್ಚುವ ಕೆಲಸದಲ್ಲಿ ತೊಡಗಿದರೆ ಸಮಯ, ಹಣ ಮತ್ತು ಸಂಪನ್ಮೂಲ ಖರ್ಚು ಎಂದು ಕೊರೋನಾ ಸೋಂಕಿನ ವಿಭಾಗದ ಮೇಲುಸ್ತುವಾರಿಯಲ್ಲಿ ಕೆಲಸ ಮಾಡುತ್ತಿರುವ ಸರ್ಕಾರದ ಮೂಲಗಳು ಹೇಳುತ್ತವೆ.

ಕಳೆದ 4 ತಿಂಗಳಿನಿಂದ ಕೊರೋನಾ ಸೋಂಕಿತರನ್ನು ಸಂಪರ್ಕಿಸಿದವರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದವರಿಗೆ ಈಗ ಸಾಕಾಗಿ ಹೋಗಿದೆ. ಕಳೆದೆರಡು ವಾರಗಳಿಂದ ಪತ್ತೆಹಚ್ಚುವ ಕಾರ್ಯ ವಿಳಂಬವಾಗಿದೆ ಹೌದು. ಇನ್ನು ಮುಂದೆ ಆ ಕೆಲಸದಲ್ಲಿ ಬದಲಾವಣೆ ಮಾಡಿ ಸ್ಥಳೀಯ, ಬೂತ್ ಮಟ್ಟದಿಂದ ಪತ್ತೆಹಚ್ಚುವ ಕಾರ್ಯವನ್ನು ಮುಂದುವರಿಸುವ ಯೋಜನೆಯಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com