ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ರಾಜ್ಯದ 14 ಕಡೆ ಎಸಿಬಿ ದಾಳಿ

ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ರಾಜ್ಯದ ವಿವಿಧ 14 ಸ್ಥಳಗಳಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. 
ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ)
ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ)
Updated on

ಬೆಂಗಳೂರು:  ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ರಾಜ್ಯದ ವಿವಿಧ 14 ಸ್ಥಳಗಳಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. 

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದಡಿ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಎಲ್‌.ಸತೀಶ್‌ ಕುಮಾರ್‌ ಸೇರಿ ರಾಜ್ಯದ ನಾಲ್ವರು ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಎಲ್.ಸತೀಶ್ ಕುಮಾರ್ ಅವರ ಮೈಸೂರು ನಗರದ ಟಿ.ಕೆ.ಲೇಔಟ್ ನ ವಾಸದ ಮನೆ, ಬೆಂಗಳೂರಿನ ಡಾಲರ್ಸ್ ಕಾಲೋನಿಯ ಬಾಡಿಗೆ ಮನೆ, ಅವರು ಕರ್ತವ್ಯ ಕಾರ್ಯನಿರ್ವಹಿಸುತ್ತಿರುವ ಗಾಂಧಿನಗರದ ವಾಣಿಜ್ಯ ತೆರಿಗೆ ಕಚೇರಿ ಮೇಲೂ ದಾಳಿ ಮಾಡಲಾಗಿದೆ.

ಇನ್ನು, ಕೋಲಾರದ ಶ್ರೀನಿವಾಸ‍ಪುರ ವಲಯದ ವಲಯ ಅರಣ್ಯಾಧಿಕಾರಿ ಎನ್‌.ರಾಮಕೃಷ್ಣ ಅವರ ವಿಜಯನಗರದಲ್ಲಿನ ನಿವಾಸ, ಬೆಂಗಳೂರಿನ ವಾಸದ ಮನೆ ಹಾಗೂ ಕಾರ್ಯನಿರ್ವಹಿಸುತ್ತಿರುವ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ‌ದ್ದಾರೆ.

 ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಎಂಜಿನಿಯರ್‌ ಗೋಪಶೆಟ್ಟಿ ಮಲ್ಲಿಕಾರ್ಜುನ ಅವರ ಪತ್ನಿ ಹೆಸರಿನ ಪೆಟ್ರೋಲ್ ಬಂಕ್ ಹಾಗೂ ರಾಯಚೂರು-ಲಿಂಗಸೂರು ರಾಜ್ಯ ಹೆದ್ದಾರಿ-20ರಲ್ಲಿರುವ ನಾಗಭೂಷಣ್ ಟ್ರ್ಯಾಕ್ಟರ್ ಷೋ ರೂಂ ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ರಾಯಚೂರಿನ ಕಚೇರಿ ಮೇಲೆ ದಾಳಿ ಕೈಗೊಳ್ಳಲಾಗಿದೆ.

ಕೃಷ್ಣಭಾಗ್ಯ ಜಲ ನಿಗಮದ ಸಹಾಯಕ ಎಂಜಿನಿಯರ್‌ ರಾಘಪ್ಪ ಲಾಲಪ್ಪ ಲಮಾಣಿ ಅವರ ಬಾಗಲಕೋಟೆಯ ಮನೆ ಮತ್ತು ಕಚೇರಿಗಳಲ್ಲೂ ಎಸಿಬಿ ಶೋಧ ಕಾರ್ಯ ನಡೆಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com