ಬೆಂಗಳೂರು: ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದ ರಾಜ್ಯ ಸರ್ಕಾರ ಇದೀಗ ಪಬ್, ಬಾರ್, ರೆಸ್ಟೋರೆಂಟ್ ಗಳಲ್ಲಿ ಕೂಡ ಮೇ.17ರವರೆಗೆ ಚಿಲ್ಲರೆ ದರದಲ್ಲಿ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಟ್ಟಿರುವುದು ಮಾಲೀಕರಿಗೆ ಮತ್ತು ಗ್ರಾಹಕರಿಗೆ ಕೊಂಚ ಖುಷಿ ತಂದರೆ ಸ್ವಲ್ಪ ನಿರಾಸೆ ತಂದೊಡ್ಡಿದೆ.
ಮೇ.17ರವರೆಗೆ ಗ್ರಾಹಕರು ಮದ್ಯಗಳನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿ ಬಳಸಬೇಕಾಗುತ್ತದೆ. ಪಬ್, ಬಾರ್, ರೆಸ್ಟೋರೆಂಟ್ ಗಳಲ್ಲಿ ಕುಳಿತು ಸೇವಿಸಲು ಅವಕಾಶವಿರುವುದಿಲ್ಲ. ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಇಂದು ಪಬ್, ಬಾರ್ ಅಂಡ್ ರೆಸ್ಟೋರೆಂಟ್ ಗಳು ತೆರೆದು ಗ್ರಾಹಕರು ಮದ್ಯ ಖರೀದಿಗೆ ಬರುತ್ತಿರುವುದು ಕಂಡುಬಂತು.
ಶಿವಮೊಗ್ಗದ ಬಾರ್ ಮಾಲೀಕ ಮಹೇಶ್ ಮಾತನಾಡಿ, ನಮ್ಮ ವ್ಯಾಪಾರಕ್ಕೆ ಇದರಿಂದ ಪ್ರಯೋಜನವಾಗುವುದಿಲ್ಲ. ಈಗಿರುವ ಸಂಗ್ರಹವನ್ನು ಮಾರಾಟ ಮಾಡುತ್ತಿದ್ದೇವಷ್ಟೆ. ಎಂಆರ್ ಪಿ ದರದಲ್ಲಿ ಮದ್ಯ ಮಾರಾಟ ಮಾಡಲು ರಾಜ್ಯ ಸರ್ಕಾರ ನಮಗೆ ಸೂಚಿಸಿದೆ. ಕಳೆದ ಎರಡು ತಿಂಗಳಿನಿಂದ ಕೊರೋನಾ ವೈರಸ್ ನಿಂದ ಬಾರ್ ಮುಚ್ಚಿ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಕಟ್ಟಡ ಬಾಡಿಗೆ ಮತ್ತು ಕಾರ್ಮಿಕರ ವೇತನ ಹೆಚ್ಚಾಗಿರುವುದರಿಂದ ನಮಗೆ ಇದು ಹೆಚ್ಚಿನ ಪ್ರಯೋಜನವಿಲ್ಲ ಎಂದರು.
Advertisement