ಮೈಸೂರು: ಕ್ಷುಲ್ಲಕ ಕಾರಣಕ್ಕೆ ಇಬ್ಬರ ಕೊಲೆ, ಆರೋಪಿ ಪೊಲೀಸ್ ವಶಕ್ಕೆ
ಮೈಸೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ಇಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಜಯಪುರ ಹೋಬಳಿಯ ಕೋಟೆಹುಂಡಿ ಸಮೀಪ ಭಾನುವಾರ ರಾತ್ರಿ ನಡೆದಿದೆ.
ಯಡಹಳ್ಳಿ ಗ್ರಾಮದ ಟಿ.ಮಂಜುನಾಥ್ (33) ಹಾಗೂ ಆರ್.ಮಂಜುನಾಥ್ (35) ಕೊಲೆಯಾದವರು.
ಕೋಟೆ ಹುಂಡಿಯ ನಿವಾಸಿ ಯೋಗೇಶ್(23) ಎಂಬಾತ ಇಬ್ಬರನ್ನು ಕೊಲೆ ಮಾಡಿದ್ದು, ಸೋಮವಾರ ನಸುಕಿನ ಜಾವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರವಿವಾರ ರಾತ್ರಿ 8 ಗಂಟೆ ಸುಮಾರಿಗೆ ಕೋಟೆಹುಂಡಿ ಸಮೀಪದ ಮೈಸೂರು ಮಾನಂದವಾಡಿ ರಸ್ತೆಯಲ್ಲಿ ಸರಕು ಸಾಗಣೆ ಆಟೋ ಒಂದರಲ್ಲಿ ಟಿ.ಮಂಜುನಾಥ್, ಆರ್.ಮಂಜುನಾಥ್ ಹಾಗೂ ಮೂರ್ತಿ ಎಂಬುವವರು ಪ್ರಯಾಣಿಸುತ್ತಿದ್ದರು. ಈ ಸಮಯದಲ್ಲಿ ಆರೋಪಿ ಯೋಗೇಶ್ ಕೂಡ ಪ್ಯಾಸೆಂಜರ್ ಆಟೋದಲ್ಲಿ ಬರುತ್ತಿದ್ದನು. ಈ ಸಂದರ್ಭದಲ್ಲಿ ಎರಡೂ ವಾಹನಗಳೂ ಪರಸ್ಪರ ಉಜ್ಜಿಕೊಂಡು ಹೋಗಿವೆ. ಈ ವಿಚಾರಕ್ಕೆ ಗಲಾಟೆ ಆರಂಭವಾಗಿದ್ದು, ಮಾತಿಗೆ ಮಾತು ಬೆಳೆದು ಯೋಗೇಶ್ ಚಾಕುವಿನಿಂದ ಟಿ.ಮಂಜುನಾಥ್ ಹಾಗೂ ಆರ್.ಮಂಜುನಾಥ್ ಅವರಿಗೆ ಇರಿದು ಕೊಲೆ ಮಾಡಿದ್ದಾನೆ. ಹೇಗೋ ಮೂರ್ತಿ ಎಂಬುವವರು ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಘಟನೆಯಲ್ಲಿ ಟಿ.ಮಂಜುನಾಥ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಆರ್.ಮಂಜುನಾಥ್ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸೋಮವಾರ ನಸುಕಿನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ