ಹುಬ್ಬಳ್ಳಿ: 2000 ನೇ ಇಸವಿಯಲ್ಲಿ ಹುಬ್ಬಳ್ಳಿಯ ಚಂದ್ರಶೇಖರ್ ಬಿಚ್ಚಗತ್ತಿ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಓಡಿಕೊಂಡೇ ಹೋಗಿದವರು, ನಿವೃತ್ತಿ ನಂತರ ಮನೆಗೆ ಬರುವಾಗಲು ಓಡಿಕೊಂಡೇ ತಮ್ಮ ಗ್ರಾಮಕ್ಕೆ ತಲುಪಿದ್ದಾರೆ.
43 ವರ್ಷದ ಚಂದ್ರಶೇಖರ್ ಬಿಚ್ಚಗತ್ತಿ ಹುಬ್ಬಳ್ಳಿಯ ಕುಂದಗೋಳ ತಾಲೂಕಿನ ಚಕ್ಕಲಬ್ಬಿ ಗ್ರಾಮದವರು, ನಿವೃತ್ತಿಯವರೆಗೂ ಪಂಜಾಬಿನಲ್ಲಿ ಬಿಎಸ್ ಎಫ್ ಯೋಧರಾಗಿ ಕೆಲಸ ಮಾಡಿದ್ದರು. ನಿವೃತ್ತಿ ನಂತರ ಸ್ವಗ್ರಾಮಕ್ಕೆ ಮರಳಿದ ಚಂದ್ರಶೇಖರ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಚಂದ್ರಶೇಖರ್ ಅವರನ್ನು ಕರೆತರಲು ಕುಟುಂಬಸ್ಥರು ಕಾರಿನಲ್ಲಿ ತೆರಳಿದ್ದರು, ಆದರೆ ಕಾರನ್ನು ಹತ್ತದ ಚಂದ್ರಶೇಖರ್ ಓಡುವ ಮೂಲಕವೇ ಮನೆಗೆ ತಲುಪಿದರು. ಕುಂದಗೋಳದ ಶಿವಾನಂದ ಸ್ವಾಮೀಜಿ ಅವರನ್ನು ಸ್ವಾಗತಿಸಲು ಕಾಯುತ್ತಿದ್ದರು.
1997 ರಲ್ಲಿ ನನ್ನ ತಂದೆ ತೀರಿ ಹೋದಾಗ ಮನೆಯಲ್ಲಿ ಹಣಕಾಸಿನ ತೊಂದರೆ ಎದುರಾಯಿತು. ಈ ವೇಳೆ ನಾನು ಸ್ಪೋರ್ಟ್ಸ್, ಯೋಗ, ಮತ್ತು ದೈಹಿಕ ಚಟುವಟಿಕೆಗಳಲ್ಲಿ ನಾನು ಸಮರ್ಥನಾಗಿದ್ದೆ, ಹೀಗಾಗಿ ನಾನು ದೇಶ ಸೇವೆ ಮಾಡಲು ಬಯಸಿದೆ, 2000ನೇ ಇಸವಿಯಲ್ಲಿ ಬಳ್ಳಾರಿಯಲ್ಲಿ ಬಿಎಸ್ ಎಫ್ ನೇಮಕಾತಿ ಆಯೋಜಿಸಲಾಗಿತ್ತು. ಆದರೆ ಚಕ್ಕಲಬ್ಬಿ ಗ್ರಾಮದಿಂದ ಬಳ್ಳಾರಿ ತಲುಪಲು ನನ್ನ ಬಳಿ ಹಣವಿರಲಿಲ್ಲ, ಹೀಗಾಗಿ ನಾನು ಬಳ್ಳಾರಿ ರೈಲು ಹಿಡಿಯಲು 43 ಕಿಮೀ ಓಡಿಕೊಂಡೆ ಹೋಗಿದ್ದೆ ಎಂದು ಚಂದ್ರಶೇಖರ್
ನೆನಪಿಸಿಕೊಂಡಿದ್ದಾರೆ.
ಅದೃಷ್ಟವಶಾತ್ ನಾನು ಆಯ್ಕೆಯಾದೆ, 2000 ದಲ್ಲಿ ನಾನು ಬೆಂಗಳೂರಿನಲ್ಲಿ ಸೇವೆಗೆ ಸೇರಿಕೊಂಡೆ, ಅದಾದ ನಂತರ ಶ್ರೀನಗರದಲ್ಲಿ ತರಬೇತಿ ಪಡೆದುಕೊಂಡೆ, ನಂತರ, ರಾಜಸ್ತಾನ, ಮೇಘಾಲಯ, ನವದೆಹಲಿ, ಪಶ್ಚಿಮಬಂಗಾಳ, ಛತ್ತೀಸ್ ಗಡ ಮತ್ತು ಪಂಜಾಬ್ ನಲ್ಲಿ ಸೇವೆ ಸಲ್ಲಿಸಿದೆ, ಕಳೆದ ವಾರ ಪಂಜಾಬ್ ನಲ್ಲಿ ನಿವೃತ್ತಿ ಹೊಂದಿದ್ದು, ಹುಬ್ಬಳ್ಳಿಗೆ ರೈಲಿನಲ್ಲಿ ಆಗಮಿಸಿದೆ. ಅಲ್ಲಿಂದ ನನ್ನ ಮನೆಗೆ ನಾನು ಓಡಿಕೊಂಡು ಬಂದು ತಲುಪಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಇಡೀ ತಾಲೂಕಿಗೆ ಚಂದ್ರಶೇಖರ್ ಸ್ಪೂರ್ತಿಯಾಗಿದ್ದಾರೆ. ಅವರಿಂದ ಬದುಕುವುದನ್ನು ಕಲಿಯಬೇಕು ಎಂದು ಕುಂದಗೋಳದ ಶಿವಾನಂದ ಸ್ವಾಮೀಜಿ ತಿಳಿಸಿದ್ದಾರೆ.
Advertisement