ತುಮಕೂರು: ಕೊರೋನಾ ಮಾರಿಗೆ ವೈದ್ಯ ಸಾವು, ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿದ ಆತಂಕ

ಮಾರಕ ಕೊರೋನಾ ವೈರಸ್ ಸೋಂಕಿಗೆ ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಯುವ ವೈದ್ಯರೊಬ್ಬರು ಬಲಿಯಾಗಿದ್ದಾರೆ.
ಮೃತ ವೈದ್ಯ ದೇವರಾಜು
ಮೃತ ವೈದ್ಯ ದೇವರಾಜು

ತುಮಕೂರು: ಮಾರಕ ಕೊರೋನಾ ವೈರಸ್ ಸೋಂಕಿಗೆ ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಯುವ ವೈದ್ಯರೊಬ್ಬರು ಬಲಿಯಾಗಿದ್ದಾರೆ.

ಹೌದು.. ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯ ದೇವರಾಜು (38 ವರ್ಷ) ಸೋಮವಾರ ರಾತ್ರಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ ದೇವರಾಜು ಅವರಿಗೆ ಕಳೆದ ಆಗಸ್ಟ್ 28 ರಂದು ಸೋಂಕು ಧೃಡ ಪಟ್ಟಿತ್ತು. ನಂತರ ಅವರು ಎಳಿಯೂರು ಬಳಿ  ಇರುವ ಚನ್ನತಿಮ್ಮನಪಾಳ್ಯ ಎಂಬ ತಮ್ಮ ಸ್ವಗ್ರಾಮದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಸಂಜೆ ತೀವ್ರ ಉಸಿರಾಟದ ತೊಂದರೆಯಾಗಿ ಚಿಕಿತ್ಸೆಗಾಗಿ ತುಮಕೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತ ವೈದ್ಯ ದೇವರಾಜು ಅವರು, ಸರ್ಕಾರಿ ಆಸ್ಪತ್ರೆಯ ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗದಲ್ಲಿ ಕಳೆದ 2017ರಿಂದಲೂ ಕಾರ್ಯ ನಿರ್ವಹಿಸುತ್ತಿದ್ದರು. ಆಸ್ಪತ್ರೆಗೆ ಬರುತ್ತಿದ್ದ ಪ್ರತೀಯೊಬ್ಬ ರೋಗಿಯನ್ನೂ ಅವರು ಸ್ಕ್ರೀನಿಂಗ್ ಗೆ ಒಳಪಡಿಸುತ್ತಿದ್ದರು. ಇದೇ ವೇಳೆ ಅವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ  ಎಂದು ಶಂಕಿಸಲಾಗಿದೆ.

ಸೋಂಕು ದೃಪಟ್ಟದಿನದಿಂದ ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಅವರಿಗೆ ದಿಢೀರನೇ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅಲ್ಲದೆ ಅವರ ಪಲ್ಸ್ ರೇಟ್ ಕೂಡ ಪ್ರತೀ ನಿಮಿಷಕ್ಕೆ 54ಕ್ಕೆ ಕುಸಿದಿತ್ತು. ಹೀಗಾಗಿ ಅವರನ್ನು ತುಮಕೂರಿನ ಖಾಸಗಿ ಸೂರ್ಯ ಆಸ್ಪತ್ರೆಗೆ ದಾಖಲಿಸಲು  ವೈದ್ಯರು ಶಿಫಾರಸ್ಸು ಮಾಡಿದ್ದರು. ಅದರಂತೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಅವರು ಸಾವನ್ನಪ್ಪಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯ ಡಾ.ಲಕ್ಷ್ಮೀಕಾಂತ್ ಅವರು, ಆಸ್ಪತ್ರೆಗೆ ಕರೆ ತಂದಾಗಲೇ ಅವರು ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ. ಅಂತೆಯೇ ತುಮಕೂರಿನ ಡಿಹೆಚ್ಒ ಡಾ.ಎಂಬಿ ನಾಗೇಂದ್ರಪ್ಪ ಅವರು ಮಾತನಾಡಿ ಅವರ ಸ್ಯಾಚುರೇಷನ್ 60ಕ್ಕಿಂತ ಕಡಿಮೆ ಇತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ರೋಗಲಕ್ಷಣವಿಲ್ಲದ ಕಾರಣ ದೇವರಾಜ್ ಅವರು ಇಲಾಖೆ ಸೂಚಿಸಿದ್ದ ಪರೀಕ್ಷೆಗಳನ್ನು ಮತ್ತು ಚಿಕಿತ್ಸೆಗಳನ್ನು ನಿರ್ಲಕ್ಷಿಸಿರಬಹುದು ಮತ್ತು ಅಲ್ಲದೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಾಗಿಲ್ಲ. ಅವರನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ ಎಂದು ಅಧಿಕಾರಿಯೊಬ್ಬರು  ಹೇಳಿದ್ದಾರೆ.

ಇನ್ನು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಜಗದೀಶ್ ಸೇರಿದಂತೆ ಆರೋಗ್ಯ ಇಲಾಖೆಯ ಐವರು ನೌಕರರು ಮಂಗಳವಾರ ಅವರ ಗ್ರಾಮದಲ್ಲಿ ದೇವರಾಜು ಅವರ ಅಂತ್ಯಕ್ರಿಯೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com