ರಾಜ್ಯ ಆರೋಗ್ಯ ಇಲಾಖೆಯ 'ಲಕ್ಷ್ಯ ಕಾರ್ಯಕ್ರಮ' ಪುನರಾರಂಭ
ಬೆಂಗಳೂರು: ಲಾಕ್ ಡೌನ್ ಕಾರಣದಿಂದ ಮೂರು ತಿಂಗಳಿನಿಂದ ಸ್ಥಗಿತಗೊಂಡಿದ್ದ ಲಕ್ಷ್ಯ ಮಾತೃ ಆರೋಗ್ಯ ಕಾರ್ಯಕ್ರಮವನ್ನು ರಾಜ್ಯ ಆರೋಗ್ಯ ಇಲಾಖೆ ಪುನರಾರಂಭಿಸಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಮತ್ತು ಶಿಶುಗಳ ಆರೋಗ್ಯವನ್ನು ವೃದ್ಧಿಸಲು ನೀಡಲು ಪೌಷ್ಟಿಕ ಪದಾರ್ಥಗಳ ಕಾರ್ಯಕ್ರಮ ಇದಾಗಿದ್ದು ತಾಯಿ-ಮಗುವಿಗೆ ಲಕ್ಷ್ಯ ಸರ್ಟಿಫಿಕೇಟ್ ನೀಡಲಾಗುತ್ತದೆ. ಗರ್ಭಿಣಿಯರಿಗೆ ಹೆರಿಗೆ ಸುಲಭವಾಗಲು ಮತ್ತು ಹೆರಿಗೆ ನಂತರ ಬಾಣಂತಿಯರಿಗೆ ಉತ್ತಮ ಆರೈಕೆ ನೀಡುವ ಮೂಲಕ ಗರ್ಭಿಣಿಯರು, ಬಾಣಂತಿಯರು ಮತ್ತು ಶಿಶುವಿನ ಮರಣ ಪ್ರಮಾಣವನ್ನು ತಗ್ಗಿಸಲು ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮ ಇದಾಗಿದೆ.
ಮಾತೃ ಆರೋಗ್ಯ ಕಾರ್ಯಕ್ರಮದ ಉಪ ನಿರ್ದೇಶಕ ಡಾ ಎನ್ ರಾಜ್ ಕುಮಾರ್, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಉತ್ತಮ ಸೇವೆ ಒದಗಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಕಾರ್ಯಕ್ರಮ ಇದಾಗಿದ್ದು ಖಾಲಿ ಇರುವ ಹುದ್ದೆಗಳಿಗೆ ಮಾನವ ಸಂಪನ್ಮೂಲಗಳನ್ನು ಭರ್ತಿ ಮಾಡಲಾಗುತ್ತದೆ ಎಂದರು.
ಈ ಯೋಜನೆ ಕರ್ನಾಟಕದಲ್ಲಿ ಆರಂಭವಾಗಿದ್ದು 2018ರ ಏಪ್ರಿಲ್ 1ರಂದು, ರಾಜ್ಯದ 124 ಆಸ್ಪತ್ರೆಗಳಲ್ಲಿ 12 ಆಸ್ಪತ್ರೆಗಳು ಲಕ್ಷ್ಯ ಪ್ರಮಾಣಪತ್ರವನ್ನು ಹೊಂದಿವೆ, ಇನ್ನೂ 10 ಆಸ್ಪತ್ರೆಗಳಿಗೆ ಸರ್ಟಿಫಿಕೇಟ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಗುಣಮಟ್ಟವನ್ನು ಸುಧಾರಿಸಲು ಮತ್ತು ಲಕ್ಷ್ಯ ಪ್ರಮಾಣಪತ್ರದಲ್ಲಿರುವ 600 ಅರ್ಹತೆಗಳನ್ನು ಹೊಂದಲು ಸರ್ಕಾರಿ ಆಸ್ಪತ್ರೆಗಳಿಗೆ 18 ತಿಂಗಳ ಸಮಯ ನೀಡಲಾಗುತ್ತದೆ. ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ ನಂತರ ಕೇಂದ್ರದಿಂದ ಮತ್ತೊಂದು ಸ್ವತಂತ್ರ ತಂಡ ಬಂದು ಪರಿಶೀಲನೆ ನಡೆಸುತ್ತದೆ ಎಂದು ವಿವರಿಸಿದರು.